Search This Blog

Tuesday, June 29, 2010

ಶಿಸ್ತಿನ ಕೋಟೆಯಲ್ಲೊಂದು ಬಿರುಕು

   ೩. ಪಂಥಾಹ್ವಾನ:

ಆದಿನ ರವಿವಾರ, ಬಾಕಿ ದಿನಗಳ ಹಾಗೆ ಇಲ್ಲಿ ಅಷ್ಟೇನೂ ಸಿಶ್ತಿನ ಮಿಲಿಟರಿಯ ದಿರುಸು ತೊಡಬೇಕೆಂಬ ಆದೇಶವಿಲ್ಲ , ಆದರೆ ನಮ್ಮ ಸೀನಿಯರ್ ತನ್ನ ಹೆಚ್ಚುಗಾರಿಕೆಗಾಗಿ ಎಲ್ಲರಿಗೂ ಆದೇಶ ಕೊಡುತ್ತಾನಷ್ಟೇ, ವಿನಹ. ಅಲ್ಲದೇ ಪ್ರತಿದಿನದ ಕರಾರುವಾಕ್ಕಾದ ಬದ್ಧತೆಯ ಕಾರ್ಯಕ್ರಮವಿಲ್ಲ.ಸ್ವಲ್ಪವಾದರೂ ಬಿಡುವಿರಬಹುದು ಅಂತ ಅಷ್ಟೇ. ನನಗೇನೂ ಸಾಮಾನ್ಯ ಧಿರುಸು ತೊಡಲೇ ಬೇಕೆಂದೇನೂ ಇಲ್ಲದಿದ್ದರೂ ಮಿಲಿಟರಿ ಧಿರುಸು ತೊಟ್ಟರೆ ಅದು ON DUTY ಅಂತ ಆಗಿ " ಸ್ವತಂತ್ರ್ಯ " ವಾಗಿ ಇರುವುದಕ್ಕೆ ಆಗಲ್ಲ ಅಷ್ಟೇ.ಅಲ್ಲವಾದರೆ ಅಲ್ಲಿ ಎಲ್ಲರೂ "ಅಂಕಲ್ ಮತ್ತು ಬಯ್ಯ" ರೇ ಆದುದರಿಂದ ....

(ಇಲ್ಲಿ ಎರಡು ಜೋಕ್ ನೆನಪಿಗೆ ಬರ್ತಾ ಇದೆ ಮೊದಲಿನದ್ದು ನೈಜ ಕಥೆ. ಆಗ ನಾವು ಮುಂಬಯಿಲ್ಲಿದ್ದೆವು. ನನ್ನ ಮೊದಲ ಮಗ ಆಗ ೩-೪ ವರುಷ ಪ್ರಾಯ ಆತನಿಗೆ. ನಾವು ಎಲ್ಲಿಯೇ ಇರಲಿ ನಮ್ಮ ರವಿವಾರ ಮಾತ್ರ ಕನ್ನಡದವರಿಗೆ ಮೀಸಲು. ಅಲ್ಲಿನ ಮಿಲಿಟರಿಯವರಾದ ಶೇಖರ್ ಚಂದ್ರೂ ಮುಂತಾದ ಹುಡುಗರು ನಮ್ಮ ಮನೆಗೆ ಬರುತ್ತಿದ್ದರು. ಆಗ ಕನ್ನಡದವರು ಜಾಸ್ತಿ. ನನ ಹುಡುಗ ಗುಂಡಗೆ ಮುದ್ದು ಮುದ್ದಾಗಿ ಯಾರು ನೋಡಿದರೂ ಕಣ್ಣಿಗೆ ತಾಕುವ ಹಾಗೆ ಇದ್ದ. ಎಲ್ಲರ ಜತೆ ಬೆರೆಯುತ್ತಿದ್ದ ಕೂಡಾ. ಹೀಗೇ ಒಮ್ಮೆ ಅವನನ್ನು ಚಂದ್ರೂ ತನ್ನ ಜತೆ ಕರಕೊಂಡು ಹೋದ ಅವನ ಬ್ಯಾರಕ್ ಗೆ. ಸ್ವಲ್ಪ ಸಮಯದ ಬಳಿಕ ಬಂದವ " ಮಮ್ಮೀ ಅಲ್ಲಿ ಬರೇ ಅಂಕಲ್ ಮಾತ್ರ ಇದ್ದಾರೆ , ಒಂದೇ ಒಂದು ಆಂಟೀನೂ ಇಲ್ಲ್ ಎಂದಿದ್ದ, ನಾವು ನಕ್ಕಿದ್ದೆವು
ಇನ್ನೊಂದು ,
ಒಂದು ಗಂಡಸಿನಲ್ಲಿ ಪ್ರಪಂಚದಲ್ಲಿ ಹೆಂಗಸರೇ ಇಲ್ಲದಿದ್ದರೆ ನೀವು ಯಾವ ಉಡುಪು ತೊಡುತ್ತಿದ್ದೀರಿ ಎಂತ ಪ್ರಶ್ನೆ ಕೇಳಿದ್ದಕ್ಕೆ , ಹೆಂಗಸರು ಇಲ್ಲದೇ ಹೋದರೆ ಯ್ಯಾರು ಉಡುಪು ತೊಡುತ್ತಾರೆ ಮೇಡಮ್ ಎಂದಿದ್ದರಂತೆ.)

ನಾನು ಇದ್ದುದರಲ್ಲಿಯೇ ಉತ್ತಮ ಉಡುಪು ಧರಿಸಿ ಹೊರ ಬಂದಿದ್ದೆ.
ನಮ್ಮ ಸೀನಿಯರ ದೂರದಿಂದಲೇ ನನ್ನ ನೋಡಿ ಹತ್ತಿರ ಕರೆಸಿ ಕೊಂಡ " ಯಾಕ್ರೀ ಸಿವಿಲ್ ನಲ್ಲಿದ್ದೀರಾ ಎಂತ ಕೇಳಿದ.
ನೀವೇನು ನನಗೆ ಮೊದಲು ಹೇಳಿದ್ದಿರಾ ಮಿಲಿಟರಿ ದಿರುಸಿನಲ್ಲಿ ಬರಲು" ಎಂದು ಕೇಳಿದೆ.
ಅವನು ಏನೂ ಅನ್ನುವ ಮೊದಲೇ ಕಮಾಂಡೆಂಟ್ ಕರೀತಾರಂತೆ ಅನ್ನುವ ಆದೇಶ ಬಂದು ಬಿಟ್ಟಿತು. ಆತ ನನ್ನನ್ನೇ ತೀಕ್ಷ್ಣವಾಗಿ ನೋಡುತ್ತಾ ನೋಡಿದೆಯಾ?
ಇದೆ ನಿನಗೆ ಗೃಹಚಾರ ಎಂದ. ನಾನು ಇದ್ದ ಹಾಗೆಯೇ ಅಲ್ಲಿಂದ ಕಮಾಂಡೆಂಟ್ ನತ್ತ ನಡೆದೆ.ಜತೆಯಲ್ಲೇ ನನ್ನ ಸೀನಿಯರ್ರೂ.
ಜೀಪ್ ತಲುಪಿ, ಸೆಲ್ಯೂಟ್ ಕೊಟ್ಟು "ಸರ್ ಇದೇ ದಿರುಸು ಇರಲಾ ಅಥವಾ ನೀವು ಸಮಯ ಕೊಟ್ಟರೆ ಕೂಡಲೇ ಮಿಲಿಟರಿ ಧಿರುಸು ತೊಟ್ಟು ಬರುತ್ತೇನೆ "ಎಂದೆ .
"ಬೇಡಬೇಡ ಹಾಗೇ ಬಾ" ಎಂದನಾತ.
ನಾನು ಜೀಪ್ ಹತ್ತಿದೆ, ನನ್ನ ಸೀನಿಯರ್ ಗೆ ನೀನು ಬರುವುದು ಬೇಡ ಎಂಬಂತೆ ಸನ್ನೆ ಮಾಡಿದರು ಕಮಾಂಡೆಂಟ್.
ಜೀಪು ಹೊರಟಿತು.
ಕಮಾಂಡೆಂಟ್ ಕರ್ನಲ್, ಸರ್ದಾರ್ಜಿ.
ನನ್ನ ನೋಡಿ ನೋಡಿ ಒಂದು ಅರ್ಜೆಂಟ್ ಕೆಲಸವಿದೆ, ಅದನ್ನು ಮುಗಿಸಲು ನಿಮಗೆ ೨೪ ಗಂಟೆ ಕಾಲಾವಕಾಶವಿದೆ.
ನಿಮ್ಮ ಅನುಭವ ಮತ್ತು ಕಾರ್ಯ ಕ್ಷಮತೆಯ ಪರೀಕ್ಷೆ ಅಂದು ಕೊಳ್ಳಿ, ಎಂದರಾತ.
ಕೆಲಸ ಏನು ಹೇಳಿ ಸರ್ ಎಂದೆ. ಹೇಳುವುದಲ್ಲ ತೋರಿಸುತ್ತೇನೆ ಎಂದರು ಆತ.


ದೊಡ್ಡ ಪರ್ವತದ ಬದಿಯಿಂದ ಹಾದು ಹೋಗುತ್ತಿತ್ತು ನಮ್ಮ ಜೀಪು.
ಪಕ್ಕದಲ್ಲಿ ಕೆಳಗೆ ತೀರಾ ಕೆಳಗೆ ಸಿಂಧೂ ನದಿ ಬೆಳ್ಳಗೆ ಜುಳುಜುಳು ಹರಿಯುತ್ತಿದ್ದಳು ,
ನಮಗೆ ಕೈ ಹಾಕಲೂ ಅಸಾಧ್ಯ ಚಳಿ ಇರುವ ಆ ನೀರಿನಲ್ಲಿ ಅಲ್ಲಿನ ಹೆಂಗಸರು ಬಟ್ಟೆ ತೊಳೆಯುತ್ತಿದ್ದರು.
ಮರ ಗಿಡಗಳು ಅಷ್ಟಾಗಿ ಕಾಣ ಸಿಗುವುದಿಲ್ಲ ಇಲ್ಲಿ.
ನನ್ನ ಇಲ್ಲಿಯವರೆಗಿನ ಸರ್ವಿಸ್ ಬಗ್ಗೆ ಕೇಳಿ, ನನ್ನಂತಹವರು ತಮ್ಮ ಯುನಿಟಿಗೆ ಅಗತ್ಯ ಅಂತಲೂ ನನ್ನೆಲ್ಲಾ ಅನುಭವಗಳ ಆಧಾರದ ಮೇಲೆ ಬಹಳಷ್ಟು ಕೆಲಸ ಕಾರ್ಯಗಳನ್ನು ಮಾಡಬಹುದೆಂತಲೂ ನನ್ನ ಅಟ್ಟಕ್ಕೇರಿಸಿದ ಆತ.

ಇದೊಂದು ಇವರ ಜಾಣತನ.
ಅವರ ಕೆಲ್ಸ ಮಾಡಿಸಿಕೊಳ್ಳುವುದು ಒಂದಾದರೆ, ಜೊಳ್ಳು ಮತ್ತು ಕಾಳು ಬೇರ್ಪಡಿಸುವದೂ ಇದರಲ್ಲಿ ಸೇರಿರುತ್ತದಲ್ಲ (ಇದಿರಿರುವನವನನ್ನು ಅಳೆಯುವ ಪರಿ).

ಅಂತೂ ಜಾಗಕ್ಕೆ ಬಂದು ಸೇರಿದೆವು, ನಮ್ಮದು ಇಂಜಿನಿಯರ್ ಯುನಿಟ್ ಆದುದರಿಂದ ಇಲ್ಲಿನ ಒಂದು ಹೊಸದಾಗಿ ಬಂದ ಸಿಗ್ನಲ್ ಯುನಿಟೊಂದಕ್ಕೆ ಆಫೀಸು ಸರಂಜಾಮು ಹೊಂದಿಸುವ ಕೆಲಸ ನಮ್ಮ ಸುಫರ್ಧಿಯಲ್ಲಿ ಬಂದಿತ್ತು.
ಅದಕ್ಕೆಂದೇ ಸಿವಿಲ್ ಇಂಜಿನಿಯರ್ ಆದ ನನ್ನನ್ನು ಕರೆದಿದ್ದರು.
ಮುಂದಿನ ಇಪ್ಪತ್ನಾಲ್ಕು ಘಂಟೆಯ ಒಳಗೆ ಆಅವರ ಆಫೀಸನ್ನು ಸರಿಪಡಿಸಿ ಕೊಡಬೇಕಾಗಿತ್ತು. ಗಾರೆಯ ಕೆಲಸ ಸುಣ್ಣ ಬಣ್ಣ ಹೊಡೆಯುವ ಕೆಲಸ ಮತ್ತು ವಿದ್ಯುತಕೆಲಸವೂ ಸೇರಿಸಿ ಒಟ್ಟಾರೆಯಾಗಿ ೨೪ ಘಂಟೆಗಳವಳಗೆ ಎಲ್ಲವನ್ನೂ ಮಾಡಿಕೊಡಬೇಕಾಗಿತ್ತು. ಎಲ್ಲವೂ ಸರಿಯಾಗಿ ಸಿಕ್ಕಿದ್ದಲ್ಲಿ...
ನನಗೆ ಬೇಕಾದ ಸಾಮಾನು ಸಿಕ್ಕಿದಲ್ಲಿ ನಾನು ೨೦ ಗಂಟೆ ಯಲ್ಲೇ ಮಾಡಿಕೊಡುತ್ತೇನೆ ಸರ್ ಎಂದಿದ್ದೆ ನಾನು ಸ್ಥಿರವಾದ ದನಿಯಲ್ಲಿ .

ಆದರೆ ಅಂತಹಾ ಲೇಹ್ ಗುಡ್ಡದ ಬಳಿಯಲ್ಲಿ ಬೇಕಾದ ಸಾಮಾನು ಸರಂಜಾಮು ಹೊಂದಿಸುವುದು ಹೇಗೆ?
ಅವರು ಹೇಳಿದ್ದಕ್ಕೆಲ್ಲಾ ತಲೆಯಾಡಿಸಿದೆ. ಆದಿನ ರವಿವಾರ ಬೇರೆ.
ನಮ್ಮ ಕಮಾಂಡೆಂಟ್ ನನ್ನನ್ನು ಪಕ್ಕಕ್ಕೆ ಕರೆದು ನನಗೆ ಬೇಕಾದ ಎಲ್ಲಾ ವಸ್ತುಗಳ ಪಟ್ಟಿ ತಯಾರಿಸಿಕೊಳ್ಳಲು ತಿಳಿಸಿದ.
ನಾನು ಕೂಡಲೇ ತಯಾರಿಸಿದೆ. ಅದನ್ನು ಸೀದಾ ಅಲ್ಲಿಂದ ಯುನಿಟಿಗೆ ಬಂದು ಸೀನಿಯರ್ ಗೆ ಪಟ್ಟಿ ಕೊಟ್ಟೆ.
ಆತ ಹೇಳಿದ ಅದೆಲ್ಲಾ ಸರಿ ನಿನಗೆ ಇಡೀ ಲೇಹ್ ಪಟ್ಟಣ "out of bond" ಹೇಗೆ ಸಾಮಾನು ತೆಗೆದುಕೊಳ್ಳುತ್ತೀ,
ಯಾವಾಗ ನೀನು ಸಾಮಾನು ತರುವುದು ಮತ್ತು ಇದನ್ನು ಕಂಪ್ಲೀಟ್ ಮಾಡುವುದು ಅದೇನು ನಿನ್ನ ಬೆಂಗಳೂರು ಅಂದ್ಕೊಂಡ್ಯಾ,ಮುಗಿಯಿತು ನಿನ್ನ ಕಥೆ, ಇಲ್ಲಿ ಮಾಡಿ ತೋರಿಸು , ಅಂತ ನೋಡೋಣ ಅಹ್ವಾನ ಕೊಟ್ಟು
ಲೇವಡಿ ಮಾಡಿದ.
ಕಾರಣ ವೆಂದರೆ ಇಲ್ಲಿಯ ಹಾಗೆ ಬೇಕಾದ ಹಾಗೆ ಪೇಟೆಗೆ ಹೋಗಿ ತರಲಾಗುವುದಿಲ್ಲವಲ್ಲ , ಇದ್ದ ಸಾಮಾನಲ್ಲೇ ಹೊಮ್ದಿಸಿಕೊಮ್ದು ಕೆಲಸ ಮಾಡಬೇಕು , ನಮ್ಮಲ್ಲಿ ಏನಿದೆ ಏನಿಲ್ಲ ಎನ್ನುವುದು ತಿಳಿದುಕೊಳ್ಳದೆ ನಾನು ಮಾತು ಕೊಟ್ಟು ಬಿಟ್ಟೆನಲ್ಲ ಆ ಆಫಿಸರ್ ಗೆ , ಅಂದರೆ ನನ್ನ ಮಾತು ಉಳಿಸಿಕೊಳ್ಳಲು ಆಗುವುದಿಲ್ಲ ಅಂತ ಇತನಿಗೆ ಖುಷಿ .

2 comments:

  1. ಕುತೂಹಲ ಮೂಡಿಸುವ ಬರಹ. ಕ್ಲೈಮಾಕ್ಸ್ ನಲ್ಲಿ ನಿಂತಿತಲ್ಲಾ!
    ಕ.ವೆಂ.ನಾಗರಾಜ್.

    ReplyDelete
  2. ಧನ್ಯವಾದಗಳು ಕವಿಯವರೇ
    ತಮ್ಮ ಮೆಚ್ಚುಗೆಗೆ ಧನ್ಯ
    ಸಧ್ಯದಲ್ಲೇ ಮುಂದುವರಿಸುವೆ

    ReplyDelete