Search This Blog

Wednesday, July 31, 2013

" ಜತೆಯೋದು" ಮತ್ತು "ಗಂಡಸರ ಅಡುಗೆ"

" ಜತೆಯೋದು" ಮತ್ತು "ಗಂಡಸರ ಅಡುಗೆ"

ಪ್ರಾಯಶಃ ಅಡುಗೆ ಮನೆ ಕಡೆ ತಲೆಯೇ ಹಾಕದ ಮಹಾನುಭಾವರನ್ನು ನೋಡಿ ಗಂಡಸರಿಗೆ ಅಡುಗೆ ಬಾರದೇ ಅಂತ ಕೇಳಿದ್ದಿರಬೇಕು. ಅಥವಾ ಎಲ್ಲಾ ಬಲ್ಲವರಿಗೆ ಈ ಅಡುಗೆಯೊಂದು ಮಹಾ ವಿದ್ಯೆಯಾ ಅಂತ ಲೇವಡಿ ಮಾಡಿದ್ದಾ ಅಂತ ಅಡುಗೆ ಭಟ್ಟರ ಅನುಮಾನ. ಆದರೆ ಈ ನವ ನವ್ಯ ಆಧುನಿಕ ಭಾರತ ವರ್ಷದಲ್ಲಿ ಅಡುಗೆ ಬಾರದವರು ಕಡಿಮೆಯೇ ಅಂತ ನನ್ನ ಅಭಿಪ್ರಾಯ. ಯಾಕೆಂದರೆ ಎಲ್ಲಿಗೇ ಹೋಗಿ ಮ್ಯಾಗಿ/ಟೋಪ್ ರಾಮನ್/ ಫಾಸ್ತ ಅಂತ ಹತ್ತು ಹಲವಾರು ದಿಢೀರ್ ಪಾಕ ಸಾಮಗ್ರಿಗಳು ಮತ್ತೆ ಮಯ್ಯಾಸ್/ಎಮ್ ಟಿ ಆರ್ ಆಶಿರ್ವಾದ್ ರವರ ದಿಡೀರ್ ಮಾಡುವಂತ ತರಹೇವಾರಿ ಉತ್ತರ ಮತ್ತು ದಕ್ಷಿಣ ಹಾಗೂ ಚೀನಾ ಮತ್ತಿತರ ಅಡುಗೆ ಸಾಮಗ್ರಿ ಸಿಗುತ್ತಿರುವಾಗ...ಬಾರದೇ ಇರಬಹುದೇ ಅನ್ನುವುದೇ ದೊಡ್ಡ ಸಂಶಯ.



ನಮ್ಮಲ್ಲಂತೂ ಭಾರೀ ಖುಷಿ ಇರೋವಾಗ... ಅಂದರೆ ಫ್ರೀ ಇರೋವಾಗ ನಾನು ಅಡುಗೆ ಮನೆ ಕಡೆ ಹೋಗುವುದುಂಟು. ಯಾರಲ್ಲದಿದ್ದರೂ ನನ್ನ ಶ್ರೀಮತಿಯಂತೂ ನನಗೆ ಸಾತ್ ಕೊಡ್ತಾಳೆ ಅಡುಗೆ ಮಾಡುವುದರಲ್ಲೂ ಮತ್ತು ಖಾಲಿಸುವುದರಲ್ಲೂ. ಇದಕ್ಕೆ ಕಾರಣವೂ ಇದೆ, ಈ ಹಾಳೂ ಮೂಳೂ ತಿಂದು ಹೊಟ್ಟೇನೂ ಹಾಳು ಮಾಡಿಕೊಂಡ ನಂತರದ ಮೂರ್ನಾಲ್ಕು ದಿನ ಪಡೋ ಪಾಡೂ ಇದೆಯಲ್ಲ ..ದೇವರೇ ಗತಿ....ಅದಕ್ಕೇ ಮನೇಲೇ ಹೊಸ ರುಚಿ ತಿನ್ನೋದೇ ಒಳ್ಳೆಯದೂ ಅಂತ ನಾಅವಿಬ್ಬರೂ ಮಾಡಿಕೊಂಡ ಹೊಸ ಒಡಂಬಡಿಕೆಯಿದು........ ಇಲ್ಲೂ ಖಾಲಿಯಾಗದಿದ್ದರೆ ಅಂತಾನಾ..?? ಮತ್ತೆ ಇದ್ದೇ ಇದೆಯಲ್ಲ... ರಸ್ತೆ ಪಕ್ಕದ ಕಚಡಾ ದಾನಿಗಳು. ಆದರೆ ಅ ಕಷ್ಟ ಇಷ್ಟರವರೆಗೆ ಬರಲಿಲ್ಲ ಬಿಡಿ. ಮೊದ ಮೊದಲೊಮ್ಮೆ ವಾರಕ್ಕೊಮ್ಮೆಯಾದರೂ ಮನೆಯಲ್ಲಿ ಹೊಸ ರುಚಿ ಅಂತ ನಾನು ಅಡುಗೆ ಮನೆಗೆ ಹೋಗುತ್ತಿರುವಾಗ...ಮಾಡುತ್ತಿರುವಾಗ ಸಾರಿಗೆ ರುಚಿ ಆಗಲಿ ಅಂತ ಸಾಮ್ಭಾರ್ ಹುಡಿ, ಸಾಂಬಾರ್ಗೆ ಹುಳಿ ಹುಡಿ ಮತ್ತು ಸಾರು ಹುಡಿ ಮತ್ತೆ ಪಲ್ಯಕ್ಕೆ ಸಾರಿನ ಹುಡಿಯನ್ನೂ ಸೇರಿಸಿ ನಮ್ಮದೇ ನಳ ಪಾಕ ಅಂತ ಮಾಡಿದಾಗ, ದಿನಾ ತಿನ್ನೋ ರುಚಿಯಿಂದ ಬೇರೆಯೇ ಆದ ಈ ಅಡುಗೆಯನ್ನು ನನ್ನ ಮಕ್ಕಳು ಮತ್ತು ಹೆಂಡತಿ ಸವಿದು ಒಳ್ಳೆಯದಿತ್ತು ಅಂತಿದ್ದಂತೂ ಹೌದು. ಆದರೆ ನಿಜವಾದ ಖುಷಿಯಿಂದ ಅಂತಿದ್ದರೋ ಅಥವಾ ಪಾಪದ ಪ್ರಾಣಿ ಇಷ್ಟಾದರು ಮಾಡಿತಲ್ಲಾ ಅಂತ ಒಳ್ಳೆಯದಿದೆ ಅಂತ ಹೇಳಿದ್ರಾ ಅಂತ ಈಗಲೂ ಈ ಒಂದು ವಿಷಯದಲ್ಲಿ ಸಂಶಯವಿದ್ದೇ ಇದೆ ನನಗೆ. ಈ ಗುಟ್ಟು ಮುಂದೆ ಯಾವುದಾದರೊಂದು ಸಂಧರ್ಭದಲ್ಲಿ ರಟ್ಟಾಗಬಹುದು ಬಿಡಿ.

ಈಗ ಮಾತ್ರ ನಾನು ಹಲಕೆಲವೊಮ್ಮೆ ಶ್ರೀಮತಿಯವರಿಗೆ ಸಹಾಯ ಮಾಡಲು ಹೋಗುವಾಗಲೆಲ್ಲಾ ಜಾಗೃತೆಯಿಂದ ನನ್ನಿಂದ ಸಾಧ್ಯವಾಗುವ ಕೆಲಸವನ್ನು ಮಾತ್ರ ವಹಿಸಿಕೊಳ್ಳುತ್ತೇನೆ. ಉದಾಹರಣೆಗೆ ಲಟ್ಟಿಸೋ ಕೆಲಸ. ಒಂದು ಕಡೆ ಕುಳಿತು ಲಟ್ಟಿಸುತ್ತಿದ್ದರಾಯ್ತು. ಆಕಾರ ಕ್ಕೆ ಜಾಸ್ತಿ ಉರುಟಾಗಬೇಕಾದರೆ ಯಾವುದಾದರೂ ಉರುಟುರುಟಾದ ಬಟ್ಟಲಿನಿಂದ ಕತ್ತರಿಸಿದರಾಯ್ತು. ಇನ್ನು ಪಲಾವ್ ಅಥವಾ ಚಿತ್ರಾನ್ನವನ್ನು (ಬಟ್ಟಲು) ತಟ್ಟೆಯಲ್ಲಿ ತುಂಬಿ ಅದನ್ನು ಊಟದ ಬಟ್ಟಲಿನ ( ತಟ್ಟೆ) ಮೇಲೆ ಕವುಚಿಟ್ಟು ಮೇಲೆತ್ತಿದರಾಯ್ತು. ಪ್ರಸೆಂಟೇಶನ್ ನಲ್ಲಿ ನಮ್ಮ ಹೆಸರೇ ಬರುತ್ತದಲ್ಲ..?? ಇಲ್ಲವಾದರೆ ಉಪ್ಪೋ ಹುಳಿಯೋ ಖಾರವೋ ಜಾಸ್ತಿ ಹಾಕಿ ನಾವು ಮಾಡಿದ್ದು ಅನ್ನಿಸೋದಕ್ಕಿಂತ ಇದೇ ಒಳ್ಳೆಯದಲ್ಲವೇ...? ಈ ಸೀಕ್ರೆಟ್ ಎಲ್ಲರಿಗೂ ತಿಳಿಸಬೇಡಿ ದಯವಿಟ್ಟು.

ಈ ಅಡುಗೆಯ ಅಮಲು ನನಗಿರಲಿಲ್ಲ. ಯಾಕೆಂದರೆ ಮನೆಯಲ್ಲಿ- ಚಿಕ್ಕವನಿರುವಾಗ- ಅಮ್ಮನ ಅಡುಗೆಯ ರುಚಿ ವರ್ಣನಾತೀತ. ಹಲಸಿನ ಕಾಲದಲ್ಲಿ ಅಂದರೆ ಗರ್ಮಿಯಲ್ಲಿ ಹಲಸಿನ ಹಣ್ಣು ಅದರ ದೋಸೆ ಪಾಯಸ, ಮುಳಕ( ಅಪ್ಪ), ಕಡುಬು, ಕಾಯಿಯ ದೋಸೆ, ಪಲ್ಯ, ಹಪ್ಪಳದ್ದೂ ಅದರಲ್ಲೆಲ್ಲ ನಮ್ಮ ಕೆಲಸವೂ (ಸಹಾಯದಲ್ಲಿ) ಖುಷಿ ಮಿಶ್ರಿತ . ಯಾಕೆಂದರೆ ಬೆಳೆದ ಹಲಸಿನ ಕಾಯಿಯನ್ನು ಮರದಿಂದ ಕೊಯ್ದು ತೆಗೆದು ಅದನ್ನು ಕತ್ತರಿಸಿ( ಮಯಣದ ಆ ಹಲಸಿನ ಕಾಯಿ ಕತ್ತರಿಸಿ ಅದರ ಸೊಳೆಗಳನ್ನು ಬೇಏರ್ಪಡಿಸುವದೂ ನಂತರ ನಮ್ಮ ಕೈಯಲ್ಲಿ ಹಿಡಿದ ಆ ಮೇಣವನ್ನೂ ತೆಗೆಯುವದೂ ಒಂದು ಕಲೆಯೇ.) ಆ ಸೊಳೆಯನ್ನು ಹದವಾಗಿ ಬೇಯಿಸಿಕೊಂಡು ಅರೆದು ಅದನ್ನು ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡಿ ಮಣೆಯ ಮೇಲೋ ಅಥವಾ ಬಟ್ಟಲಿನ ಮೇಲೋ ಒತ್ತಿ ಹಪ್ಪಳ ಮಾಡಿ ಬೇಯಿಸುವದು. ನಿಜವಾಗಿ ಒಣ ಬಿರು ಬೇಸಗೆಯಲ್ಲಿ ಇದನ್ನು ಉತ್ಪಾದಿಸೋ ಕೆಲಸ ತುಂಬಾ ತ್ರಾಸವಾದರೂ ಆಸಕ್ತಿ ದಾಯಕವಾಗಿತ್ತು. ಇದೇ ರೀತಿ ಗೆಣಸಿನ ಹಪ್ಪಳ ಸಹಾ. ಈ ರೀತಿ ಮಾಡುವಾಗ ಈ ಹಪ್ಪಳದ ಹೂರಣ ನಮ್ಮ ಹೊಟ್ಟೆಗೆ ಸೇರುತ್ತಿದ್ದುದೂ ಉಂಟು, ಹಲಸಿನ ಹಣ್ಣಿನ ಹಪ್ಪಳ ಮಾಡುವಾಗಲಂತೂ ಹೊಟ್ಟೆ ಸೇರಿ ಉಳಿದದ್ದು ಮಾತ್ರ ಹಪ್ಪಳವಾಗುವ ಸಾಧ್ಯತೆಯೇ ಹೆಚ್ಚು. ಇನ್ನು ಮಾವಿನ ಹಣ್ಣೀನ ಸೀಸನ್ನಲ್ಲಂತು ಮಾವಿನ ಹಣ್ಣುಗಳನ್ನು ತಂದು ಅದರ ಸಿಪ್ಪೆ ತೆಗೆದು ಅವುಗಳ ರಸವನ್ನು ಬೇರ್ಪಡಿಸಿ ಒಳ್ಳೆಯ ಬಿಸಿಲಿನಲ್ಲಿ ಚಾಪೆಯ ಮೇಲೆ ಹರಡುತ್ತಾ ಒಣಗಿದ ಮೇಲೆ ಅದರ ಮೇಲೆಯೇ ಪದರ ಪದರವಾಗಿ ಹಚ್ಚುತ್ತಾ ಒಣಗಿಸಿ ಮಾಡಿದ ಹಪ್ಪಳದಂತಹ ಮುರಬ್ಬಾ ( ಹಿಂದಿಯಲ್ಲಿ ಆಮ್ ಪಾಪಡ್) ಮಳೆಗಾಲದಲ್ಲಿ ತಿನ್ನಲು ಬಹಳ ರುಚಿ ಅದು ಚಾಪೆಯ ಮೇಲೋ ಅಥವಾ ಗೆರೆಸಿನ ಮೇಲೋ ಒಣಗಿಸಿದಾಗ ಅದರ ಪಡಿಯಚ್ಚು ಈ ಹಣ್ಚಟ್ ಮೇಲೆ ಬರುತ್ತದಲ್ಲ, ಆ ಡಿಸಾಯ್ನ್ ನೋಡಲು ತುಂಬಾ ಚೆನ್ನಾಗಿರತ್ತೆ. ಇನ್ನು ಮುರಿನ ಹಣ್ಣು ಸಹಾ ತಂದು ಒಣಗಿಸಿ ಇಟ್ಟುಕೊಳ್ಳುತ್ತಿದ್ದೆವು ಬೇಸಗೆಯಲ್ಲಿ ಅದರ ಪಾನಕ ಸಾರು ತುಂಬಾನೇ ಒಳ್ಳೆಯದು. ನಾನು ತುಂಬಾ ಚಿಕ್ಕವನಿರಬೇಕಾದರೆ ನಮ್ಮ ಮನೆಯಲ್ಲಿ ಧೂಪದ ಎಣ್ಣೆಯನ್ನೂ ಮಾಡುತ್ತಿದ್ದರು. ಅದು ಇನ್ನೂ ಜಾಸ್ತಿ ಪರಿಶ್ರಮ ಮತ್ತು ತಾಳ್ಮೆ ಬೇಡುತ್ತೆ. ಭೆಳೆದ ದೂಪದ ಕಾಯನ್ನು ತಂದು ಅದರ ಸಿಪ್ಪೆ ತೆಗೆದು ಕಾಯನ್ನು( ಬೀಜವಾ ಕಾಯಿಯಾ ಇನ್ನೂ ಸಂಶಯವಿದೆ ನನಗೆ) ಒಡೆದು ಅದರ ಮಧ್ಯದ ಸಿಂಬಳದಂತಹ ಪದಾರ್ಥವನ್ನು ತೆಗೆದು  ತೊಳೆದು ಗುದ್ದಿ ನೀರಿನಲ್ಲಿ ಕದಡಿಸಿ ತುಂಬಿದ ಪಾತ್ರೆಯಲ್ಲಿ ಬೇಯಿಸುತ್ತಾರೆ . ಬೇಯಿಸುವ ಅನ್ನುವುದಕ್ಕಿಂತ ಕುದಿಸುವುದು ಅನ್ನುವುದು ಸರಿಯಾದ ಶಬ್ದ. ಕುದಿಯುವ ನೀರಿನ ಮೇಲಿನಿಂದ ಎಣ್ಣೆ ಬರುತ್ತದೆ ಅದನ್ನ ತೆಗೆಯಬೇಕು . ಇದಕ್ಕೆ ಬೇಕಾದ ತಾಳ್ಮೆಪರಿಶ್ರಮ ಈಗಿನವರಲ್ಲಿ ಕಷ್ಟವೇ ........... ಅದನ್ನೇ ಹಳ್ಳಿಗಳಲ್ಲಿ ನಿತ್ಯ ಅಡುಗೆಗೆ ಬಳಸುತ್ತಿದ್ದರು . ಈಗ ಇದೆಲ್ಲ ಇರಲಿಕ್ಕಿಲ್ಲ ಬಿಡಿ. ನನಗೆ ಇವೆಲ್ಲ ಈಗ ಅಸ್ಪಷ್ಟ ನೆನಪು ಅಷ್ಟೆ. ಯಾವುದೋ ತಿಂಡಿ ಮಾಡುವ ಸಂಭ್ರಮದಲ್ಲಿ ಹಳ್ಳಿಯಲ್ಲಿ ಗಂಟೆಗಟ್ಟಲೆ ಒಲೆ ಮುಂದೆ ಕುಳಿತ ಹೆಂಗಸರು ಮಾಡುವ ಕೆಲಸ ಅವರ ಪರಿಶ್ರಮ ಈಗಲೂ ಎಣಿಸಿದರೆ ಅದೊಂದು ಸಂಭ್ರಮದ ಅಚ್ಚರಿಯೇ. ಆದರೆ ಇಂತಹ ಶ್ರಮದಲ್ಲೆಲ್ಲಾ ಮಕ್ಕಳದ್ದೂ ಮನೆಯ ಗಂಡಸರದ್ದೂ ಸಮಪಾಲೇ ಇರುತ್ತಿತ್ತು. ಮತ್ತೆ ಆಚೆ ಈಚೆ ಮನೆಯವರ ಪರಸ್ಪರ ಶ್ರಮ ದಾನದ ಪದ್ಧತಿಯೂ ಇದಕ್ಕೆ ಇಂಬುಕೊಡುತ್ತಿದ್ದು ಅದರ ಮಜವೇ ಬೇರೆ ಬಿಡಿ. ಇವೆಲ್ಲಾ ಸಹನೆಯ ಸಹಬಾಳ್ವೆಯ ಉತ್ತಮೋತ್ತಮ ನಿದರ್ಶನಗಳೆಂದೆನಿಸುತ್ತದೆ ನನಗೆ.


ಕೆಸುವಿನ ಪತ್ರೊಡೆ, ಅದರ ಉಪ್ಪಿಟ್ಟು( ಈಗಲೂ ಬಾಯಲ್ಲಿ ನೀರೂರುವುದು) ಮಳೆಗಾಲದಲ್ಲಿ ಅದು ಮಾಡಬಹುದಾದಂತ ದಿನವನ್ನೂ ಕರಾರುವಾಕ್ಕಾಗಿ ನಿರ್ಧರಿಸಿ ಬಿಟ್ಟಿದ್ದೂ ಉಂಟು ಮರ ಕೆಸ ಹುಡುಕಲು. ಅದಕ್ಕೂ ಕಾಡಿನ ಕೆಲವೊಂದು ಮರ ಮಾತ್ರ ಮೀಸಲು. ಮಳೆಗಾಲ ಶುರುವಾಗಿ ಸುಮಾರು ಹದಿನೈದಿಪ್ಪತ್ತು ದಿನಗಳಲ್ಲಿ ನಾವು ಸರ್ವೇ ಮಾಡಲು ಹೊರಡುತ್ತಿದ್ದೆವು. ಮೇಲಿನ ೨ ಅಥವಾ ಮೂರು ಎಲೆ ಮಾತ್ರ ಕೊಯ್ಯಬೇಕು ಅದು ಎಳೆ ಹಸಿರು ಎಲೆ ಮಾತ್ರ. ಜಾಸ್ತಿ ಬೆಳೆದರೆ ಬಾಯಿ ತುರಿಸೋದು ಗ್ಯಾರಂಟಿ ( ಕಾಯಿ ಕತ್ತವೇ ಬೇಕಾದೀತು ತುರಿಸಲು- ನಮ್ಮ ತಮಾಷೆ ಇರುತ್ತಿತ್ತು) ಹೀಗೆ ಚಿಗುರು ಮರಕೆಸದ ಎಲೆ ಕೊಯ್ದು ತಂದು ಮನೆಯಲ್ಲಿ ತೊಳೆದಿಟ್ತರೆ ನಮ್ಮ ಕೆಲಸ ಮುಗಿಯಿತು. ಮತ್ತೆ ಅಮ್ಮ ಅಕ್ಕ ಅದರ ಹಿಂಬದಿ ಚೆನ್ನಾಗಿ ಒರೆಸಿ ( ಇಲ್ಲವಾದರೆ ಹುಳ ಕುಟ್ಟಿ ಇರುವ ಸಾಧ್ಯತೆ ಹೆಚ್ಚು) ಮೊದಲೇ ಅರೆದಿಟ್ಟ ಅಕ್ಕಿ ಮೆಣಸು ಹುಣಿಸೆ ಹುಳಿ ಮಿಶ್ರಣ ಹಚ್ಚುತ್ತಾರೆ. ಮೇಲೆ ಮತ್ತೊಂದು ಎಲೆಯಿಟ್ಟು ಅದರ ಬೆನ್ನಿಗೇ ಹಚ್ಚುತ್ತಾ ಹೀಗೆ ಮೂರ್ನಾಲ್ಕು ಪದರವನ್ನಾಗಿ ಮಡಿಸಿ ಅದನ್ನು ಇಡ್ಲಿ ಅಟ್ಟದಲ್ಲಿ( ಕುಕ್ಕರಿನಲ್ಲಿ) ಬೇಯಿಸುತ್ತಾರೆ. ನಂತ ರ ಅದನ್ನು ಚಿಕ್ಕಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಕಾಯಿ ಬೆಲ್ಲ ಈರುಳ್ಳಿ ಹಾಕಿ ಮಾಡುವ ಕರಿಬೇವಿನ ಒಗ್ಗರಣೆಯ  ಉಪ್ಪಿಟ್ಟು ಅಹಾಹಾ ಅದರ ರುಚಿಯೇ ಬೇರೆ.
ಇನ್ನು  ಅಕ್ಕ ಮಾಡುವ ಅತ್ರಾಸ ಅವಳಿಗೆ ಅವಳೇ ಸಾಠಿ, ಇದೊಂದು ಕಲಿಯಾಗಲಿಲ್ಲವೆಂಬ ಕೊರಗು ಈಗಲೂ ಇದೆ ನನ್ನ ಅಮ್ಮನಿಗೆ. ಒಂದೆರಡು ಸಾರಿ ಪ್ರಯತ್ನ ಪಟ್ಟಿದ್ದರು ಅದರ ಪಾಕ ಸರಿಯಾಗದೆ ಅತ್ರಾಸವನ್ನು ಎಣ್ಣೆಯಲ್ಲಿ ಹಾಕಿದಾಗ ಅದು ಒಡೆದು ಚೂರು ಚೂರಾಗಿ ಅದನ್ನ ಅಪ್ಪಯ್ಯ ಒಂದು ಎರಡು ಮೂರು ಅಂತ ಲೆಕ್ಕ ಹಾಕುವಂತೆ ನಟಿಸುತ್ತಾ ನೂರು ಎಂದದ್ದು ನಾವೆಲ್ಲಾ ನಗಾಡಿದ್ದು ನೆನಪಿಗೆ ಬರುತ್ತಿದೆ. ಆದರೆ ರವೆ ಲಾಡು, ಹೆಸರು ಗೋಧಿ ಲಾಡು, ತಂಬಿಟ್ಟಿನ ಲಾಡು ತರಹೇವಾರಿ ದೋಸೆಗಳು, ಅದರಲ್ಲೂ ಕಬ್ಬಿನ ಹಾಲಿನ ದೋಸೆ ಮೆಂತೆ ದೋಸೆ ಹಲಸಿನ ಹಣ್ಣೀನ ದೋಸೆ ಇತ್ಯಾದಿ. ಇನ್ನು  ಪಾಯಸಗಳು ರಸಾಯನ ಇಂತಹವುಗಳೆಲ್ಲಾ ನಮ್ಮ ಬಾಯಿ ರುಚಿಯನ್ನು ಮತ್ತಷ್ಟು ಹೆಚ್ಚಿಸೋ ಅಮ್ಮನ ಕೈ ಚಳಕದ ಸಾಧನಗಳಾಗಿ ನಮ್ಮನ್ನು ಅಡುಗೆ ಕೆಲಸದ ಸಹಾಯಕ್ಕಾಗಿ ಹಚ್ಚಿಸುವ ಸಾಧನಗಳಾಗಿದ್ದವು. ತೆಂಗಿನ ಕಾಯಿ ಹಾಕಿ ಅಕ್ಕಿ ಕಜ್ಜಾಯವಂತೂ ನಾನು ನಾನು ಕದ್ದೂ ತಿಂದದ್ದಿದೆ ಅವೆಲ್ಲಾ ಅಷ್ಟು ರುಚಿಕರ. ತಂದೆ ಸಂಜೆ ಬಂದ ಮೇಲೆ ಅವರೂ ಅಮ್ಮನಿಗೆ ಸಹಾಯ ಮಾಡಲು ಬರುತ್ತಿದ್ದರು. ಕಾರದ ಕಡ್ಡಿ ಚಕ್ಕುಲಿ ಹಿಟ್ಟುಗಳನ್ನು ಅವುಗಳ "ಬಂಡಿ"ಯಿಂದ ಸ್ವಾತಂತ್ರ್ಯ ಕೊಡೋ ಜವಾಬ್ದಾರಿ ಯೆಲ್ಲಾ ನನ್ನ ತಂದೆಯಿಂದ ಕಲಿಯುತ್ತಿದ್ದೆವು. ಮತ್ತೆ ಆ ಗೋದಿಯ ಸೇವಿಗೆ ಉಪ್ಪಿಟ್ಟು ಅದರ ರುಚಿಯೂ ವರ್ಣನಾತೀತವೇ. ಆಗೆಲ್ಲಾ ರೇಶನ್ ನಲ್ಲಿ ಗೋದಿ ಸಿಗುತ್ತಿದ್ದು ಅದನ್ನ ತಂದು ಖಾರದ ಬಿಸಿಲಿಲಲ್ಲಿ ಒಣ ಹಾಕಿ ನಂತರ ಮೂರು ದಿನ ನೀರಲ್ಲಿ ನೆನೆ ಹಾಕಬೇಕು, ಅದರ ನೀರನ್ನು ಮಾತ್ರ ದಿನಾ ಬದಲಿಸಬೇಕು ಇಲ್ಲವಾದರೆ ಅವರ ವಾಸನೆಯಲ್ಲಿ ಎಷ್ಟಾಗುತ್ತದೆ ಎಂದರೆ ಯಾರೂ ಸಹಿಸಲಾರರು. ಅದನ್ನು ಅರೆಯುವ ಕಲ್ಲಿನಲ್ಲಿ ಹಾಕಿ ಅರೆಯಬೇಕು ನಂತರ ಅರೆ ಬೇಯಿಸಿಕೊಂಡು ಅದನ್ನ ಶಾವಿಗೆ ಬಂಡಿಯಲ್ಲೋ ಅಥವಾ ಚಕ್ಕುಲಿಯ ಬಂಡಿಯಲ್ಲೋ ಶ್ಯಾವಿಗೆ ಮಾಡಿ ಮತ್ತೆ ಖಾರದ ಬಿಸಿಲಿನಲ್ಲಿ ಒಣಗಿಸಿ ಇಟ್ಟರೆ ಮಳೆಗಾಲದ ಮಧ್ಯಾನ್ನದ ತಿಂಡಿಯಾದ ಗರಿಗರಿಯಾದ ಸುವಾಸನಾಯುಕ್ತ ಉಪ್ಪಿಟ್ಟು ತಯಾರಿಸಲು ಸಿದ್ಧವಾಗುತ್ತೆ. ಅದೂ ಹಾಗೇ ಸ್ವಲ್ಪ ಸಿಹಿಯಾದ ಆ ಉಪ್ಪಿಟ್ಟಿನ ರುಚಿಯೋ , ಅಹಾಹಾ.... ರುಚಿಯಂತೂ ಈಗಲೂ ನಾಲಗೆಯಲ್ಲಿದೆ.


ಆಗಿನ ಒಂದು ಮಜಾ ನಿಮಗೆ ಹೇಳಬೇಕೆನ್ನಿಸಿದೆ. "ಜೊತೆಯೋದು" ಕಂಬೈನ್ಡ್ ಸ್ಟಡಿ ಮಾಡುವುದಕ್ಕೆಂತ ಒಮ್ಮೆ ಶಂಕರ ನಾರಾಯಣಕ್ಕೆ ನನ್ನ ಗೆಳೆಯನ ( ಆತ ಬ್ರಹ್ಮಚಾರೀ ಕೋಣೆಯಲ್ಲಿದ್ದ- ಅಂದರೆ ಓದಲು ಬಾಡಿಗೆ ಖೋಲಿಯಲ್ಲಿದ್ದ ನನ್ನನ್ನು ಕರೆದಿದ್ದ. ಸರಿ ಅಮ್ಮನ ಹತ್ರ ಕೇಳಿದ್ದಕ್ಕೆ ಸದಾ ತಿಂಡಿ ಪೋತನಾದ ನನಗೆ ಊಟ ದ ಕಥೆ ಏನು ಅಂದಾಗ ನಾವಿಬ್ಬರೂ ಅಡುಗೆ ಮಾಡಿಕೊಳ್ಳುತ್ತೇವೆ ಎಂದಿದ್ದೆ. ಅಮ್ಮ ನಗಾಡಿದ್ದರು. ಸರಿ ಗೆಳೆಯನ ರೂಮಿಗೆ ಬಂದೆ . ಆತನ ಬಳಿಯಲ್ಲಿದ್ದ ಪರಿಕರಗಳಿಂದ ಎಲ್ಲದಕ್ಕಿಂತ ಸುಲಭವೆಂದರೆ ಕುಚ್ಚಕ್ಕಿ ಗಂಜಿ ಅನ್ನಿಸಿತು. ಸರಿ ಪಾತ್ರ ಸ್ಟೌ ಮೇಲಿಟ್ಟು ಪಾತ್ರ ಇಟ್ಟು ನೀರು ಹಾಕಿ ಅಕ್ಕಿ ತೊಳೆದು ಬೇಯಿಸಲಿಟ್ಟೆವು. ಸ್ವಲ್ಪ ಕುದಿಯಲು ಆರಂಭವಾಗುವಾಗ ಓದಿನ ಮಧ್ಯೆ ಏನನ್ನಾದರೂ ಮುಚ್ಚಬೇಕಿತ್ತಲ್ಲ ಅನ್ನಿಸಿತು. ಅದನ್ನೇ ಹೇಳಿದಾಗ ಪಕ್ಕದಲ್ಲಿ ಏನಾದರೂ ಮುಚ್ಚಲು ಹೇಳಿದ. ನಾನೋ......., ಪಕ್ಕದಲ್ಲಿ ಕಂಡ ಒಂದು ರಟ್ಟಿನ ತುಂಡನ್ನು ಮುಚ್ಚಿದೆ. ನಮ್ಮ ಓದು ಮುಗಿಯುತ್ತಾ ಬಂದಂತೆ ಹಸಿವೆಯೂ ಜೋರಾಯ್ತು. ಆತ ಊಟ ಮಾಡೋಣವೇ ಎಂದು ಕೇಳಿದ. ಸರಿ ಅಂತ ಉಣಲು ಕುಳಿತೆವು. ಮಧ್ಯೆ ಮಧ್ಯೆ ಏನೋ ಗಟ್ಟಿಯಾಗಿ ತಿನ್ನಲು ಸಿಗುತ್ತಿರಬೇಕಾದರೆ ಏಯ್ ಆಲೂ ಹಾಕಿದ್ಯಾ? ಚೆನ್ನಾಗಿದೆ ಅಂದೆ ನಾನು. ಯಾರು ಹಾಕಿದ್ದು ಆಲುಗಡ್ಡೆ? ನಾನು ಹಾಕಿರಲಿಲ್ಲವಲ್ಲಾ ಎಂದ ಅಚ್ಚರಿಯಿಂದ ಆತ. ಮತ್ತೆ..??
ನಾನು ಮುಚ್ಚಿದ್ದು ರಟ್ಟಾದುದರಿಂದ ಬಿಸಿ ಗಂಜಿಯ ಹಬೆಗೆ ಅದು ಮುದ್ದೆಯಾಗಿ ಗಂಜಿಗಿಳಿದಿತ್ತು. ಅದೂ ಗೊತ್ತಾಗಿದ್ದ ಸಂಜೆ ಮನೆಗೆ ಬಂದ ಮೇಲೆ ಈವಿಷಯಗಳೆಲ್ಲಾ ಅಮ್ಮನ ಹತ್ರ ಹೇಳಿಕೊಂಡಾಗ ಅವಳು ಕಂಡು ಹಿಡಿದಾಗಲೇ.
ಈ ವಾರ್ಷಿಕ ಪರೀಕ್ಷೆಗಳೆಲ್ಲಾ ಮಾವಿನ ಹಣ್ಣಿನ ಸೀಸನ್ ನಲ್ಲೇ ಬರೋದು, ನಮ್ಮ ಹೊಟ್ಟೆ ಉರಿಸಲು. ಒಮ್ಮೆ ನಾನೂ ನನ್ನ ದೊಡ್ಡಪ್ಪನ ಮಗನೂ ಕಂಬೈನ್ಡ್ ಓದಿನ ನೆಪದಲ್ಲಿ ದೊಡ್ದ ಮಾವಿನ ಮರದ ಕೆಳಗೆ ನೆರಳಲ್ಲಿ ಓದುತ್ತಾ ಜತೆಗೆ ದಂಡಿಯಾಗಿ ಮಾವಿನ ಹಣ್ಣುಗಳನ್ನೂ ತಿನ್ನುತ್ತಾ ಮಾವಿನ ಹಣ್ಣಿನ ರಾಸಾಯನಿಕ ಕ್ರೀಯೆಯಿಂದಾಗಿ ನಿದ್ರಾ ದೇವಿಯ ವಶರಾಗಿ, ಅಮ್ಮನ ಬೇಹುಗಾರರ ದೆಸೆಯಿಂದಾಗಿ ಮನೆಯಲ್ಲೆಲ್ಲಾ ಗೊತ್ತಾಗಿ ರಾದ್ದಾಂತವಾದುದನ್ನು ಈಗಲೂ ಹೇಳಿ ನಮ್ಮನ್ನು ನಾಚಿಸುತ್ತಿರುತ್ತಾರೆ.

ಈ ಸಲ ಇಷ್ಟೇ ಸಾಕು. ಮುಂದಿನ ಸಲ ಮತ್ತೆ.

Saturday, July 6, 2013

ತ್ಯಾಂಪನ ಗೋಳು...೧.



ಸರ್ ನಿಮ್ಮ ತ್ಯಾಂಪ ಸೀನರು ಬಂದಿದ್ದಾರೆ"
ಮಂಜು ಎಲ್ಲರಿಗೂ ಕೇಳುವಂತೆ ಕೂಗಿ ಹೇಳಿದ.
ನಾನೆಂದೆ "ಸರಿ, ಒಳ ಕಳಿಸು"
ಎಲ್ಲರೂ ನನ್ನ ಮುಖ ನೋಡಿದರು, ನಾನು ತಾರಸಿ ನೋಡಿದೆ
ಹದಿನೈದಿಪ್ಪತ್ತು ಜನರಿದ್ದೆವು, ಹೊಸದಾಗಿ ಬದಲಾಗಿಸಿದ ಏ ಸಿ ರೂಮದು, ಕಿಟಿಕಿಗಳೆಲ್ಲವೂ ಮುಚ್ಚಿದ್ದವು. ಪಟ್ಟಿ ಪರದೆಗಳೂ. ಅದಲ್ಲದೇ ಅಲ್ಲಲ್ಲಿ ಕ್ಯಾಬಿನ್ನುಗಳೂ ಇದ್ದವು ಅದರಲ್ಲೂ.
ಬಂದರು ನನ್ನ ಜನ್ಮದ ಗೆಳೆಯರು. ನಿಮಗೇ ತಿಳಿದಿದೆಯಲ್ಲಾ ತ್ಯಾಂಪ, ಸೀನನ ಸ್ವರ ಸ್ವಲ್ಪ ... ಸ್ವಲ್ಪ ....ಏನು ಗಟ್ಟೀಯೇ,
"ಏನೋ ಒಂತರಾ ವಾಸ್ನೆ ಅಲ್ವಾ" ಅಂದ ಸೀನ. "ತುಂಬಾನೆ ಸೆಖೆ ಫ್ಯಾನ್ ಹಾಕು ಅಂದ ತ್ಯಾಂಪ ತಾನೇ ಎದ್ದು ಕಿಟಿಕಿ ತೆಗೆಯಲು ಹೊರಟ,
"ಯಾಕೋ, ಏಸಿ ರೂಮಲ್ವಾ..??".ನಾನು.
"ನಿನ್ ಕರ್ಮ, ಬೇಡ ಅಂದ್ರೆ ಕೇಳಿದೆಯಾ, ಪಿಜ್ಜಾ ಅದರಜ್ಜಾ ಅಂತ ಹಾಳೂ ಮೂಳೂ ತಿನ್ಸಿದೆಯಲ್ಲಾ, ಮತ್ತೆ ಈಗ ವಾಸ್ನೆ ಅಂದ್ರೆ..? ಎಲ್ಲಿದೆಯಾ ಸಂಡಾಸು? ಕಿಟಿಕಿಯ ಪಕ್ಕದಿಂದಲೇ ಕೂಗಿ ಕೇಳಿದ ತ್ಯಾಂಪ.
ಪಕ್ಕದಲ್ಲಿರೋರು ಮುಖಕ್ಕೆ ಗಾಳಿ ಹಾಕೊಳ್ಳೋದು ಕಂಡಿತು. ತ್ಯಾಂಪನ್ನ ಹತ್ರ ಕರೆದೆ. "ನೋಡೂ ಆ ಪಕ್ಕ ಚೇಂಝ್ ರೂಂ ಅಂತ ಇದೆಯಲ್ಲಾ.. ಅದೇ... "
ಅದು ಪುಸ್ತಕಾಲಯ ತರ ಇದೆಯಲ್ಲ ಸೀನನ ಸಂಶಯ.
"ಅದು ಬರೇ ಪರದೆಯಷ್ಟೇ" , ಏನೋ ಒಂದು ಬದಲಾವಣೆ ಇರಲಿ ಅಂತ ಎಲ್ಲಾ ನವೀಕರಿಸಿದ್ದೆವು. ಇನ್ನೊಬ್ಬರ ಕಟ್ಟಡಗಳನ್ನು ಮಾಡಿಸಿ ಕೊಡುವ ನಮ್ಮ ಕಛೇರಿಯೂ ನವೀನವಾಗಿರಲಿ ಅಂತ, ಮಾರುಕಟ್ಟೆಯ ಹೊಸತೆಲ್ಲಾ ನಮ್ಮಲ್ಲಿ ಬಂದಿದ್ದುವು.
ವ್ಯಾಲಂಟೈನ್ ದಿನದ ಅವಾಂತರದಲ್ಲಿ ತ್ಯಾಂಪಿ ತುಂಬಾನೇ ಸಿಟ್ಟಾಗಿ ಓಡಿಸಿಬಿಟ್ಟಿದ್ದಳು ತ್ಯಾಂಪನನ್ನ. ಅವರ ಅನ್ಬನ್ ಸರಿಮಾಡಲು ಸೀನನೂ ಜತೆಗೇ ಇದ್ದನಲ್ಲ.
ಅದೇ ಸಿಟ್ಟಿನಲ್ಲಿ ತ್ಯಾಂಪ ಯಾವುದೋ ಬಸ್ಸಿನಲ್ಲಿ ಕುಳಿತು ಬೆಂಗಳೂರಿನ ಗೊತ್ತೇ ಇಲ್ಲದ ಯಾವುದೋ ಗಲ್ಲಿಗೆ ಹೋಗಿದ್ದ. ಆತನನ್ನು ಹುಡುಕಲು ನಾನೂ ಸೀನನೂ ತರಹೇವಾರಿ ಕಾರ್ಯಕ್ರಮ ಹಮ್ಮಿಕೊಂಡು ಸುಸ್ತಾಗಿದ್ದೆವು. ಆತನ ಕಯ್ಯಲ್ಲಿದ್ದ ಹೊಸ ಜಂಗಮವಾಣಿಯಿಂದಾಗಿ ಆತ ಬಿಳಿ ಮೈದಾನದ ಚೌಟರ ಹತ್ತಿರ ಹೋಗೋ ಬದಲು ಬನಶಂಕರಿಯ ಬಸ್ಸು ಹತ್ತಿ ಳಿದು ೬೦೦ ರಲ್ಲಿ ಕುಳಿತಿದ್ದ. ಊರೆಲ್ಲಾ ತಿರುಗಿ ಅದು ಹೇಗೋ ಗಾಂಧೀ ರಸ್ತೆಗೆ ಬಂದ, ನಮ್ ಮಂಜು ಅವನನ್ನ ನೋಡಿ ನನಗೆ ಕರೆ ಮಾಡಿದ್ದ. ಸೀನನನ್ನೂ ಅವನನ್ನೂ ಜತೆ ಮಾಡಿ ಕಳುಹಿಸಿದೆ, ಇಲ್ಲವಾದರೆ ಇನ್ನೊಂದು ಹುಡುಕಾಟಕ್ಕೆ ನಾನೇ ಹೊರಡ ಬೇಕಾಗಿತ್ತು.
ಸೀದಾ ಗಾಂಧೀ ರಸ್ತೆಯಲ್ಲಿರೋ ನಮ್ ಕಚೇರಿಗೇ ಬರುವವರು.. ಬಾತುಕೋಳಿಯದ್ದೋ ಮತ್ತೊಂದರದ್ದೋ ಗುಜರೀ ಆಹಾರದ ಖಾನಾವಳಿಯಲ್ಲಿ ತಿಂದು ಬಂದಿದ್ದಿರ ಬೇಕು. ಹವಾ ನಿಯಂತ್ರಿತ ಕಛೇರಿಯಲ್ಲಿ ಇದೂ ಒಂದು ಸಮಸ್ಯೆ... ಅದೇ ಹವೆಯನ್ನೇ ಬಾರಿ ಬಾರಿಗೂ........ ಬೇಡ ಬಿಡಿ.
ಯಾಕೋ ಸ್ವಲ್ಪ ಸಮಯ ಜಾಸ್ತಿ ಆಯ್ತು ಅನ್ನಿಸಿತು.
ಚೆಂಜ್ ರೂಮಿಗೆ ಹೋದವ ಬರಲಿಲ್ಲ..?? ಸೀನನನ್ನು ಕಳುಹಿಸಿದೆ......
ಸಮಯವಾಯ್ತು ಈತನೂ ಬರಲಿಲ್ಲ..
ನಾನೇ ಹೊರಟೆ..
ಏಯ್ ಏನಯ್ಯಾ? ನೀನೋಬ್ಬ ಭವನನಿರ್ಮಾಣಗಾರನಾ? ನೋಡು ಈ .. ಮಾಡುವುದನ್ನ ಇಷ್ಟು ಎತ್ತರದಲ್ಲಿ ಕಟ್ಟಿಸಿದ್ದೀಯಾ? ಅದೂ ಅಲ್ಲದೇ ನೀರು ಎಲ್ಲಿದೆ?
ತಿರುಗಿ ನೋಡಿದೆ ಬೇಸಿನ್ ನನ್ನು "ಒಂದ" ಕ್ಕಾಗಿ ಉಪಯೋಗಿಸುತ್ತಿದ್ದ ಸೀನನನ್ನು ತಡೆದೆ. ಅದು ಕೈ ತೊಳೆಯಲು ಉಪಯೋಗಿಸೋದು. ಎಲ್ಲಿ ತ್ಯಾಂಪ?
ಆತ ಸಂಡಾಸಿನೊಳಗಿದ್ದ, ತೊಳೆಯಲು ಒಂದು ಚೆಂಬೂ ಇಲ್ಲವಾ ಮರಾಯಾ? ಪಕ್ಕದಲ್ಲಿದ್ದ ನೀರೆರೆಚುವ ಗುರಾಣಿ ತೋರಿಸಿದೆ. ಹೊರ ಬಂದವ, ಯಾಕೆ ಒಂದೂ ನೀರುಬಳಸುವ ನಲ್ಲಿಗಳು ಕೆಲಸವೇ ಮಾಡಲ್ಲ ಕೇಳಿದ. ಅವನಿಗೆ ಇದು ನೀರಿನ ಬಳಕೆಯನ್ನು ಮಿತಗೊಳಿಸಲು ಉಪಯೋಗಿಸುವ ಸ್ವಯಂ ಚಾಲಿತ ನಲ್ಲಿಯ ಬಗ್ಗೆ ತಿಳಿಸಿಕೊಟ್ಟೆ. ಇಲ್ಲದಿದ್ದರೆ ಮಂಜು ನನಗೇ ಭಾಷಣ ಬಿಡುವ ಅಪಾಯವಿತ್ತು.
ಹೊರ ಹೊರಟೆ..ಇಬ್ಬರನ್ನೂ ಕರೆದುಕೊಂಡು....
ಇಲ್ಲಿಯೇ ಇದ್ದರೆ ಎಲ್ಲರೂ ಸೇರಿ ನನ್ನನ್ನೂ ಹೊರ ಹಾಕುವ ಅಪಾಯವೂ ಕಂಡಿತ್ತು ಅವರೆಲ್ಲರ ಕಣ್ಣುಗಳಲ್ಲಿ.
ಪಕ್ಕದ ಪಾರ್ಕನಲ್ಲಿ ಜನ ಸಮೂಹ...
ಯಾವ ಕಾರ್ಯಕ್ರಮವಿದು..? ಅತ್ತ ಕಡೆ ಹೊರಟ ತ್ಯಾಂಪ, ನಾವಿಬ್ಬರೂ ಆತನನ್ನ ಹಿಂಬಾಲಿಸಿದೆವು.
"ಅತ್ಮಕ್ಕೆ ಸಾವಿಲ್ಲ. ದೇಹ ಅನ್ನೋದು ಅಂಗಿ ಇದ್ದ ಹಾಗೆ. ನಾವೆಲ್ಲಾ ಒಂದು ಅಂಗಿ ಹಳೆಯದಾದಾಗ ಅದನ್ನು ಬಿಸಾಡಿ ಹೊಸ ಅಂಗಿ ತೊಟ್ಟು ಕೊಂಡ ಹಾಗೆ ಆತ್ಮಈ ಶರೀರವನ್ನು ಬದಲಾಯಿಸುತ್ತಾ ಇರುತ್ತದೆ. ಅದಕ್ಕೇನೆ ನಾವಂದೆವು ಆತ್ಮಕ್ಕೆ ಸಾವಿಲ್ಲ........
ನೆರೆದವರಲ್ಲಿ ಒಬ್ಬಳು ಕೇಳಿದಳು " ಸ್ವಾಮೀ ಈಜನ್ಮದಲ್ಲಿ ನನಗೆ ಮುಕ್ತಿ ಇಲ್ಲ, ಒಂದು ಗಂಡಾಂತಗ ಕಳೆಯಿತೋ ಇನ್ನೊಂದು ತಾಪತಗ,. ಅದು ಕಳೆದಡೆ ಇನ್ನೊಂದು ಗಂಡಾಂತಗ, ಅದಡ ಬೆನ್ನ ಹಿಂದೆ ಮಗದೊಂದು...
ತಾಯೀ ಇವೆಲ್ಲಾ ನಿಮ್ಮ್ ನಿಮ್ಮ ಪೂರ್ವ ಜನ್ಮದ ಕೃತ..ಇರಲಿ ಬಿಡು ನಿನಗೆ ಮುಂದೆ ಇವೆ ಸುದಿನಗಳು
ಯಾವಾಗ ಸ್ವಾಮೀಜಿ?
.ಅಂದ ಹಾಗೆ ನಾನು ಕೊಟ್ಟ ಭಸ್ಮ ತಿನ್ನಿಸಿದೆ ತಾನೇ?
ಅದೇ ಸ್ವಾಮೀ ಆ ಭಸ್ಮ ತಿಂದಾಗಿನಿಂದ ಕತ್ತೆ ಹಾಗೇ ದುಡೀತವ್ನೆ, ನನ್ನ ಪಕ್ಕಾನೇ ಬರೋದಿಲ್ಲ
" ನೋಡಮ್ಮಾ ನಿನ್ನ ಹಣೆ ಬರಹದಲ್ಲಿ ಸುಮಾರು ೪೦ ವರ್ಶ ಕಷ್ಟ ಇದ್ದೇ ಇದೆ"
ನನಗೀಗ ನಲವತ್ತೈದು ವರ್ಷ ಸ್ವಾಮೀ"
" ಇನ್ನೂ ಇಂತದ್ದೆಲ್ಲಾ ಅಭ್ಯಾಸ ಆಗ್ಲಿಲ್ವಾ ನಿಂಗೆ ? " ಸ್ವಾಮಿ ಮುಖ ಬೇರೆಡೆಗೆ ತಿರುಗಿಸಿದರು.
" ಭಕ್ತರೇ ಈ ಕಷ್ಟ ಕೋಟಲೆಗಳು ನಿಮ್ಮ ಈ ಜನ್ಮದವಲ್ಲ, ಇವೆಲ್ಲಾ ಒಂದೇ ಜನ್ಮದಲ್ ಮುಗೀತು ಅಂದ್ಕಂಡ್ರಾ ಅವರೇ ಬುದ್ದುಗಳು, ಅದೇನಿಲ್ಲ...ದೊಡ್ಡ ದೊಡ್ಡ ಶ್ರೀಮಂತರೆಲ್ಲ ದೊಡ್ಡೋರಾಗಿದ್ದುದು, ಪೂರ್ವ ಜನ್ಮದ ಸುಕೃತಗಳ ಫಲವಷ್ಟೇ, ನೀನು ಈಗಿನ ಜನ್ಮದಲ್ಲಿ ಒಳ್ಳೆಯ ಕೆಲ್ಸ ಮಾಡಿದ್ದು ಅದರ ಫಲ ಅನುಭವಿಸಿಯೇ .... ಅಂದ ಹಾಗೆ ನೀನು ಏನ್ ಕೆಲ್ಸ ಮಾಡ್ಕೊಂಡಿದ್ದೀ?
ನನ್ನ ಗಂಡ ಅಟೋರಿಕ್ಷಾ ಚಲಾಯಿಸುತ್ತಿದ್ದಾನೆ" ಭಾರೀ ಖುಷಿಯಲ್ಲಿ ಹೇಳಿದ್ದಳು ಆಭಕ್ತೆ.
ಸ್ವಾಮಿ ಉಗುಳು ನುಂಗುತ್ತಾ " ಈಗ ನೀನು ಹೇಳಮ್ಮಾ" ಇನ್ನೊಂದು ಕಡೆ ತಿರುಗಿದರು
ಏನು ನಿನ್ನ ಸಂಕಷ್ಟ..?
ನನ್ನ ಗಂಡ ಬೇರೆ ಹೆಂಗ್ಸನ್ನ್ ಮಡ್ಕೊಂಡಿದಾನೆ, ದಿನಾ ಕುಡ್ದು ಬಂದು ನಂಗೆ ಹೊಡೀತಾ ಇರ್ತಾನೆ’
ನೋಡಮ್ಮಾ ಈ ವಿಭೂತಿ ತಗೋ, ಇದನ್ನ ಜೇನು ತುಪ್ಪದಲ್ಲಿ ಕಲಸಿ ನಿನ್ನ ಗಂಡನಿಗೆ ತಿನ್ನಿಸು, ಮೂರೇ ದಿನದಲ್ಲಿ ಸರಿ ಹೋಗ್ತಾನೆ.
ಅಷ್ಟರಲ್ಲಿ ಇನ್ನೊಬ್ಬಳು " ಸ್ವಾಮೀ ನೀವು ಹೋದವಾರ ಕೊಟ್ಟ ಇಭೂತಿ ಚೆನ್ನಾಗಿ ಕೆಲ್ಸ ಮಾಡ್ತಾ ಇದೆ, ನನ್ನ ಗಂಡ ಮೂರೇ ಮೂರು ದಿನ್ದಲ್ಲಿ ಗಂಡ್ಸಾಗಿದ್ದಾನೆ; ಆದ್ರೆ ಅದು ಕಹಿ ಇತ್ತಂತೆ...!!" ನಾಚುತ್ತಾ ಹೇಳಿದಳು.
"ಅಲ್ಲಮ್ಮಾ ನಿಂಗೆ ಅದನ್ನ ತಿನ್ನಕ್ಕೆ ಹೇಳಿದ್ದಲ್ಲಮ್ಮ, ಅದನ್ನ ನಿನ್ ಮುಖಕ್ಕೆ ಹಚ್ಕೊಳ್ಳೊಕ್ ಅಲ್ವಾ ಹೇಳಿದ್ದೂ."..ಆತ ಸ್ವಾಮಿಯ ಪಟ್ಟದ ಸಿಷ್ಯ
ಅದೇ ಸಾಮೀ ನನ್ ಗಂಡ ಇನ್ನೊಂದಪ ಸಲ್ಪ ಸಿಹಿ ಆಗಿರೂ ಬಸ್ಮ ತತ್ತಾ ಅಂದೋ.
ಈಗ ನಾಚಿದ್ದು ಸ್ವಾಮಿಯೇ.."
ಸ್ವಾಮೀಜಿ ಗೆ ಜಯವಾಗಲಿ ಒಕ್ಕೊರಳಲ್ಲಿ ನೆರೆದ ಭಕ್ತರ ದಂಡು ಕೂಗಿತು.
ಅಷ್ಟರಲ್ಲಿ ಪಾನ್ ಬೀಡಾದವ ಬಂದ ಅಡ್ಡ ಬಿದ್ದು ಸ್ವಾಮಿಗೆ ಒಂದು ಹರಿವಾಣದಲ್ಲಿ ದುಡ್ಡಿನ ಕಂತೆಯನ್ನೇ ಇಟ್ಟು ಒಪ್ಪಿಸಿದ" ಸ್ವಾಮೀ ಗುಟ್ಕಾ ನಿಷೇಧ ಬಂದು ನನ್ ಸರ್ವ ನಾಶ ಆಯ್ತು ಅಂದ್ಕೊಂಡ್ ಇದ್ದೇ ಈಗ ಬೀಡಾ ವ್ಯಾಪಾರ ಜಬರ್ದಸ್ತ್ ಆಗಿ ಬಿಟ್ಟಿದೆ ನಿಮ್ ಮಂತ್ರ ಕೆಲ್ಸ ಮಾಡ್ತು ಸ್ವಾಮೀ ನಿಮ್ಮಿಂದ ನಮ್ ಜೀವನ ಪಾವನ ಆಯ್ತು"
ಮತ್ತೊಬ್ಬ, ಹಾಫ್ ಕಾಮ್ ಮಳಿಗೆಯವ, ತರಕಾರೀ ಮಾರುವವ ಎಲ್ಲರೂ ತಮ್ಮ ತಮ್ಮ ಲಾಭದಾಂಶ ಸ್ವಾಮಿಗೆ ತಲುಪಿಸಿದರು.
ಅಷ್ಟರಲ್ಲಿ ಯಾರದ್ದೋ ಕೂಗು ಕೇಳಿಸಿತು. " ಏಯ್ ತಲೆ ಕೆಟ್ಟ ಸ್ವಾಮೀ, ನಿನ್ನ ಮುಖಕ್ಕೆ ಬೆಂಕಿ ಬೀಳ.........
ಮೊದಲು ಸ್ವಾಮಿ ಹತ್ರ ಕಷ್ಟ ಸುಖ ಹಂಚಿಕೊಂಡವಳು ಅವನಿಗಡ್ಡ ಬಂದಳು
" ಥೂ ನಿನ್ !! ದೇವರಂತ ಸ್ವಾಮೀಗೆ ಬಯ್ತೀಯಾ, ನಿಂಗ್ ಒಳ್ಳೆದಾಗಲ್ಲ ನೋಡೂ....??"
"ಏನ್ ಒಳ್ಳೆದಾಗೋದು ಅವನಜ್ಜಿ ಪಿಂಡ... ಥೂ.. ಸ್ವಾಮಿ ಅಂತೆ ಸ್ವಾಮೀ, ಹೆಂಗಸರನ್ನ ಆಕರ್ಷಿಸೋಕೆ..ಇಂತದ್ದೆಲ್ಲಾ ಆಟ ಕಟ್ತಾನೆ..... ಅವನಿಗೆ ಬೇರೆ ಕೆಲ್ಸ ಇಲ್ಲ.."
"ನೋಡೀ ಹಾಗೆಲ್ಲಾ ಹೇಳ್ಬೇಡಿ.. ಅವರೇನಾರೂ ಶಾಪ ಕೊಟ್ರೆ ಮುಗೀತು ನಿಮ್ ಕಥೀ.."
"ಶಾಪ ಅಂತೆ ಶಾಪ ಇಂತ ಕಳ್ ಸನ್ಯಾಸಿಗಳನ್ನ್ ಸಾವ್ರ ಕಂಡಿದ್ದೀನಿ ನಾನು... "
"ಹಾಗೆಲ್ಲಾ ಹೇಳ್ಬೇಡಿ ಅವರು ಹಿಮಾಲಯಲ್ಲಿದ್ದು, ಜ್ಞಾನ ಪಡ್ಕಂಡ್ ಬಂದೋರು.."
ಜ್ಞಾನ ಅಂತೆ ಜ್ಞಾನ, ಏನಿಲ್ಲ, ನೀನ್ ಸುಮ್ನಿರು, ನಾನಿವತ್ತು ಈ ವಯ್ಯಂಗೇ ಜ್ಞಾನ ತೋರಿಸ್ತೀನ್ ನೋಡು..
ಈ ನಾಟಕ ನೋಡುತ್ತಿದ್ದ ಸ್ವಾಮಿ ಹೇಳಿದರು
" ಭಕ್ತಾ ಇದೆಲ್ಲಾ ಸರಿಯಾಗಲ್ಲ, ಕೋಪ ನಿಂಗೆ ಒಳ್ಳೆಯದಲ್ಲ ಬಿಟ್ಬಿಡು ಸರಿಯಾಗತ್ತೆ, ಅದಕ್ಕೆ ಈ ಪ್ರಸಾದ ತಿನ್ನು, ಒಂದರಿಂದ ಹತ್ತು ಎಣಿಸು, ಮನಸ್ಸು ತಿಳಿಯಾಗತ್ತೆ"
" ನಾನ್ ನಿನ್ನ ಭಕ್ತ ಅಲ್ಲ.......ಹತ್ತಲ್ಲ ನೂರು ಎಣಿಸ್ತೇನೆ, ಇಂತ ಬಣ್ಣದ ಮಾತುಗಳಿಗೆ ನಾನು ಬಲಿಯಾಗಲ್ಲ, ಹೆಣ್ಕಕ್ಕಳನ್ನ ಹೀಗೇ ಬಲಿಯಾಗಿಸ್ತೀಯಾ ಪಾಪಿ"
ಸ್ವಾಮಿಗಳು ಶಾಂತವಾಗಿ "ನೋಡು ಭಕ್ತಾ ಹಾಗೆಲ್ಲಾ ಮಾತಾಡಬಾರದು , ಮನಸ್ಸನ್ನು ಶಾಂತವಾಗಿಸುವುದು ಹೇಗೆ ಅಂತ ಯೋಗ ಕಲಿಸಿಕೊಡುತ್ತೆ ನಿಂಗೆ. ನಮ್ ಆಶ್ರಮಕ್ಕೆ ಸೇರ್ಕೋ..."
"ನೀನು ನಿನ್ ಭಕ್ತರು... ಎಲ್ಲರೂ ಢೋಂಗಿ ಗಳು, ಈ ಆಶ್ರಮವೂ ಢೋಂಗಿ..." ತನ್ನ ಕೈಯ್ಯಲ್ಲಿದ್ದ ಕೋಲನ್ನೆತ್ತಿ ಹೊಡೆಯಲು ಹೊರಟಾಗ.. ಕ್ರೋಧಗೊಂಡ ಭಕ್ತರ ಸಮೂಹವನ್ನು ತನ್ನ ಕಣ್ಣಲ್ಲೆ ಶಾಂತ ಮಾಡಿದ ಸ್ವಾಮಿ ತನ್ನ ಪಕ್ಕದಲ್ಲಿದ್ದ ಕಮಂಡಲವನ್ನೆತ್ತಿ ಅದರ ನೀರನ್ನು ತನ್ನ ಕೈಗೆ ಹಾಕಿಕೊಂಡು ಏನೋ ಮಂತ್ರ ಹೇಳುತ್ತಾ ಅವನ ಮೇಲೆ ಪ್ರೋಕ್ಷಿಸಿಯೇ ಬಿಟ್ಟರು.
ಆಶ್ಚರ್ಯ !!! ಹೊಡೆಯಲೆಂದು ಬಂದ ವ್ಯಕ್ತಿ ಅಚೇತನನಾಗಿ ಡಬ್ಬನೆ ಕೆಳಗೆ ಬಿದ್ದೇ ಬಿಟ್ಟ.
ಆ ಕ್ಷಣ ನಿಶ್ಶಬ್ದವಾಯ್ತು ಇಡೀ ಸಭೆಯೇ.....
"ಮತ್ತೆ ....ಅಂತ ದೊಡ್ಡ ಸ್ವಾಮಿಗೇ ಬಯ್ದರೆ ಹೆಂಗೆ ಅವರು ಬಿಟ್ಟಾರಾ..??? ತರಹೇವಾರಿ ಮಾತು ತರಹೇವಾರಿ ಗುಸುಗುಸು.
"ಶಾಂತಿ ಶಾಂತಿ" ಸ್ವಾಮಿಗಳು ಹೇಳಿದರು. ಅವನಿಗೇನೂ ಆಗಿಲ್ಲ, ಆತ ತುಂಬಾ ಒಳ್ಳೆಯವನೇ, ಆತನ ಹಳೆಯ ಜನ್ಮವನ್ನು ನಾನು ಜ್ಞಾಪಿಸಿದೆ ಅಷ್ಟೇ, ಇನ್ನು ಹತ್ತೇ ನಿಮಿಷದಲ್ಲಿ ಆತ ಎಚ್ಚರಾಗ್ತಾನೆ, ಹೇಳಿದೆನಲ್ಲಮ್ಮ ನಿನ್ನ ಗಂಡ ಈಗ ಮೊದಲಿನವನಾಗಿದ್ದಾನೆ ಬಿಡು"
ಮತ್ತೆ ಜಯಜಯಕಾರ ಮೊಳಗಿತು.
ಸ್ವಾಮಿಯ ಟೆಂಟಿನೊಳಗಿನ ಅಂಗಡಿಯ ಬಸ್ಮದ ಪ್ಯಾಕೇಟುಗಳು ಸಾವಿರ ಗಟ್ಟಳೆ ಖರ್ಚಾದವು.
ಯಾವುದಕ್ಕಿದೆ ಬಡತನ??.
ಕೆಳಕ್ಕೆ ಬಿದ್ದ ವ್ಯಕ್ತಿಗೆ ಎಚ್ಚ್ರವಾಯ್ತು. ಎದ್ದುಕುಳಿತ, ತಾನೆಲ್ಲಿದ್ದೇನೆ? ಪಕ್ಕದಲ್ಲಿನ ಆತನ ಹೆಂಡತಿ ಯನ್ನು ಗುರುತಿಸಿದ, ಅವಳು ವಿಷಯ ತಿಳಿಸಿದೊಡನೆಯೇ ಇಬ್ಬರೂ ಸ್ವಾಮಿಯ ಕಾಲಿಗೆ ಬಿದ್ದರು. ಕೈ ಕೈ ಹಿಡಿದು ಹೊರ ಹೊರಟರು. ಅವರ ಮನೆಯಲ್ಲಿ ಇನ್ನು ದೀಪಾವಳಿಯೇ
ಇದೆಲ್ಲಾ ನೋಡುತ್ತಿದ್ದ ತ್ಯಾಂಪ..
ಅರೆ...... ಈಸ್ವಾಮಿ ನನ್ನ ತ್ಯಾಂಪಿಯ ಸಂಭಂಧವನ್ನ ಸರಿ ಮಾಡಿಯಾನೇ....??

(ವಿವರ ಮುಂದಿನ ಭಾಗ ದಲ್ಲಿ...)

ಶೀನನ ಗುಟ್ಟು ಮತ್ತು ರಜೆಯ ಪ್ರವಾಸ


ಶೀನನ ಗುಟ್ಟು ಮತ್ತು ರಜೆಯ ಪ್ರವಾಸ


ಚಿಕ್ಕವನಾಗಿರುವಗ ಪಕ್ಕಾ ಮಾಸ್ಟ್ರ ಮಗನಾದ ನಾನು ಬಾಕಿ ಪಡ್ಡೆಗಳಿಗೆಲ್ಲಾ ಪ್ಯೂರ್ ಆಗಿ ಪುಳಿಚಾರ್ ಅನಿಸಿಕೊಂಡಿದ್ದೆ. ತುಂಬಾ ಸಮಯದಿಂದ ಹೆಚ್ಚು ಕಮ್ಮಿ ಒಂದು ವರ್ಷದಿಂದ ಕಾಯುತ್ತಿದ್ದ ಸಮಯವದು ಕೊನೆಗೂ ಬಂದೇ ಬಂತು. ಅದೇ ನಮ್ಮ ದೊಡ್ಡ ರಜೆ. ಓದಾಟ ಒದ್ದಾಟದ ಪರೀಕ್ಷೆಗಳ ಒತ್ತಡೊತ್ತಡದ ಸಮಯ ಮುಗಿದು ನಾವೆಲ್ಲಾ ಹಕ್ಕಿಗಳ ಹಾಗೆ ಸ್ವಚ್ಛಂದವಾಗಿ ವಿಹರಿಸಲನುವಾದ ಕಾಲವದು.ನಮ್ಮ ಹಳ್ಳಿಯ ಸಾಹಸ ಭರಿತ ಬದುಕಿನ ಹೊಸ ಹೊಸ ಅನ್ವೇಷಣೆಗಳ ಕಾಲವದು. ಅದಕ್ಕೇ ಅಷ್ಟೊಂದು ಹುರುಪು ಹುಮ್ಮಸ್ಸು. ನಮ್ಮೆಲ್ಲರ ಮನೆಯವರೂ ನನ್ನ ತಂದೆ ಶಾಲಾ ಮಾಸ್ತರಾಗಿದ್ದರಿಂದ ಇವಕ್ಕೆಲ್ಲಾ ರಜಾ ಕಾಲದಲ್ಲಿ ಹೇರಾಳ ಅವಕಾಶವಿರುತ್ತಿತ್ತು. ಇಡೀ ವರ್ಷದ ಶಾಲೆಯ ಜೀವನದ ಓದಾಟದ ಏಕತಾನತೆಯನ್ನು ನೀಗಿಸಲು ವರ್ಷಾಂತ್ಯದ ಪರೀಕ್ಷೆ ( ದೊಡ್ಡ ಪರೀಕ್ಷೆಯ)ನಂತರದ ವೆಕೇಶನ್ ರಜೆಯೇ ರಂಗ ಸಜ್ಜಿಕೆ. ಈ ಸಾರಿ ಹೊಸತೇನಾದರೂ ಸಿಗಲೆಂಬ ತುಡಿದಾಟದಲ್ಲಿರುವಾಗ ನನ್ನ ಓರಗೆಯ ಶೀನ ಬೆಟ್ಟಿಯಾಗಿದ್ದ. ಒಂದು ಅನೂಹ್ಯ ರೀತಿಯಲ್ಲಿ ಅವತ್ತು ಶನಿವಾರ ಸಂಜೆ ವಿಚಿತ್ರ ಸದ್ದು ಕೇಳಿಹೊರ ಬಂದರೆ ಶೀನ. ಹಾಗೆ ನಮಗೆಲ್ಲಾ ಶೀನ ಔಟ್ ಒಫ್ ಬೋಂಡ್!!, ಅತ ಓಡಿ ಹೋದವನಂತೋ ಅಥವಾ ಪಡ್ಡೆ ಅಂತಾನೊ ಏನೋ.ಒಂದು ಕಾರಣಕ್ಕಾಗಿ. "ಏಯ್ ನಾಳೆ ಬರ್ತೀಯಾ ಎಲ್ಲೋ ಒಂದ್ಕಡೆ ಹೋಗೋಣ" ಅಂದ "ಎಲ್ಲಿಗೆ ?" ಕೇಳಿದ್ದಕ್ಕೆ ಸರ್ಪ್ರೈಸ್ ಅಂದ. ಬೆಳಿಗ್ಗೆ ತಿಂಡಿ ತಿಂಡು ಹೊರಡೋಣವೇ ಎಂದು ಕೇಳಿದೆ, ನನಗೆ..? ಅಂತ ಪ್ರಶ್ನೆ ಹಾಕಿದ.. ಅಲ್ಲದೇ ಒಂದು ಪರಿಹಾರವೂ ಇತ್ತು ಅವನಲ್ಲಿ. ಮನೆಯ ಅಡುಗೆ ಮನೆಯ ಗೋಡೆಯಲ್ಲಿ ಒಂದು ಸಣ್ಣ ಗವಾಕ್ಷವಿದೆ ಅದು ಸೀದಾ ಕೊಟ್ಟಿಗೆಗೆ ತೆರೆಯುತ್ತೆ. ಹಳ್ಳಿಯ ಮನೆಯಲ್ಲಿ ಬೆಳ್ಳಂಬೆಳಿಗ್ಗೆ ಕರೆದ ತಂಬಾಲನ್ನು ಮನೆಯೊಳಕ್ಕೆ ತರುವಾಗ ಯಾರಾದರೂ ನೋಡಿ ದೃಷ್ಟಿ ತಾಕಿದರೆ ಕಷ್ಟ ಅಂತ ಅಮ್ಮ ಮಾಡಿಕೊಂಡ ಸ್ಪೆಷೆಲ್ ಏರ್ಪಾಡದು. "ತಾನು ಅಲ್ಲಿಯೇ ಇರ್ತೇನೆ ನೀನು ಅಲ್ಲಿಂದಲೇ ನನಗೆ ತಿಂಡಿ ಕೊಟ್ಟು ಬಿಡು" ಅಂದ. ಶೀನನೇ ನಮಗೆ ಔಟ್ ಒಫ್ ಬೋಂಡ್ ಇನ್ನು ಅವನಿಗೆ ದೋಸೆ ಕೊಟ್ಟದ್ದು ಗೊತ್ತಾದರೆ ನನ್ನ ಗತಿ..?.

ಈ ಸಾರಿಯ ನಮ್ಮ ಅಡ್ವಂಚರ್ ಹೀಗೆ ಆರಂಭವಾಯ್ತು , ಪ್ರತಿ ವರ್ಷದ ಶೀನನ ಇಂತಹಾ ಯೋಜನೆಯಲ್ಲಿ ಏನಾದರೊಂದು ವೈಶಿಷ್ಟ್ಯತೆ ಇದ್ದೇ ಇರುತ್ತದೆ.ಅದನ್ನು ನಾವೆಲ್ಲಾ ತಿಪ್ಪರಲಾಗ ಹಾಕಿದರೂ ಗೊತ್ತು ಮಾಡಿಸಿಕೊಳ್ಳಲಾರದಷ್ಟು ಸರ್ಪ್ರೈಸ್ ಆಗಿಯೇ ಇರುತ್ತದದು.. ಅಮ್ಮ ತೆಂಕಬೈಲು ಉಡುಪರ ಹೆಂಡತಿಯ ತಾನೇ ಹೊಲಿದಿಟ್ಟಿದ್ದ ಹೊಸಾ ಕುಬುಸವನ್ನು ಅದರ ಅಳತೆಗೆಂದು ಕೊಟ್ಟ ಹಳೆ ರವಿಕೆಯನ್ನೂ ಒಂದು ಪೇಪರಿನ ಪೊಟ್ಟಣದಲ್ಲಿ ಕೊಟ್ಟು ಜಾಗ್ರತೆಯಾಗಿ ಅವರಿಗೆ ತಲುಪಿಸಿ ಅವರು ಕೊಟ್ಟ ಹತ್ತು ರೂಪಾಯಿ ತರಲು ಹೇಳಿದಳು ಇದಕ್ಕೇ ನನಗೆ ಸುಲಭವಾಗಿ ಪರ್ಮಿಶನ್ ಸಿಕ್ಕಿತ್ತು. ಈ ಸಾರಿಯ ನಮ್ಮ ಯಾತ್ರೆ ಸುಮಾರು ಹತ್ತು ಕಿ ಮೀ ನಷ್ಟು ಇದ್ದುದರಿಂದ ನಾನೂ ರಾಮನೂ ಅಷ್ಟರೊಳಗೆ ಹ್ಯಾಗಾದರೂ ತಿಳಿದುಕೊಳ್ಳಲೇಬೇಕೆಂತ ಒಪ್ಪಂದ ಮಾಡಿಕೊಂಡಿದ್ದೆವು.ನಾವು ಪಯಣಿಸುತ್ತಿರುವುದು ನಮ್ಮ ಹುಟ್ಟೂರಿಗೆ ಅಂತ ಮಾತ್ರ ಅವನ ತಮ್ಮ ಪಿಣಿಯನಿಂದ ( ಅದೂ ಆತ ಅ ಬ ಪೆ ಆದುದರಿಂದ ) ಗೊತ್ತಾಗಿತ್ತಷ್ಟೇ.ಬರೇ ಒಂದು ಹಳೆ ಮೋಟು ಪಂಜೆ ಮತ್ತು ಒಂದು ಹಳೇ ಅಂಗಿಯ ಶೀನ ಶಾಲೆಯಲ್ಲಿ ಓದಿದವನಲ್ಲ. ಬರೇ ಗಂಟಿ( ಜಾನುವಾರು) ಮೇಯಿಸಿಕೊಂಡೇ ಆತ ನಮ್ಮೊಡನೆ ಬೆಳೆದದ್ದು. ಸಾಮಾನ್ಯ ಓದಲು ಅಂತ ನಮ್ಮಿಂದ ಆತ ಕಲಿತದ್ದು ಬಿಟ್ಟರೆ ಅವನಿಂದ ನಾವು ಕಲಿತದ್ದೇ ತುಂಬಾ ಜಾಸ್ತಿ, ಆದರೂ ಯಾವ ಕಲಿತವರಿಂತಲೂ ಕಮ್ಮಿಯೇನಲ್ಲ ಆತ.



ಶೀನನೂ ನಾನೂ ಓರಗೆಯವರು, ಆತನೇ ನಮ್ಮಗುಂಪಿಗೆಲ್ಲಾ ಗುರು, ನಾಯಕ. ಶಾಲೆಯ ಪ್ರತೀ ಕ್ಲಾಸಿನಿಂದ ೬-೭ ಬಾರಿ ಓಡಿಹೋದ ಬಂಟನೀತ. ಓದೊಂದು ಬಿಟ್ಟು ಬಾಕಿ ಎಲ್ಲದರಲ್ಲಿಯೂ ಮಹಾ ಪಂಡಿತನೀತ. ಧೈರ್ಯದಲ್ಲೂ ಅಷ್ಟೇ. ನಮ್ಮೂರಿನ ಮಂಜರು ಒಮ್ಮೆ ಆತನಿಗೆ ದಿನಾ ಪೂಜೆ ಮಾಡಿ ಪುಣ್ಯ ಪಡೆದುಕೊಂಡ(?)ತನ್ನ ಮತ್ರ ಶಕ್ತಿಯೆಲ್ಲಾ ಈ ಜನಿವಾರದಲ್ಲೇ ಇದೆ ಎನ್ನುತ್ತಿದ್ದರು ಇವನಲ್ಲಿ, ಈತನಿಗೆ ಏನನ್ನಿಸಿತ್ತೋ ತಮಾಷೆ ಮಾಡಿದ. ಅವರು ಏಯ್ ಈ ಜನಿವಾರ ಹಿಡಿದರೆ ರಕ್ತ ಕಾರಿ ಸಾಯ್ತೀಯಾ ಎಂದರು ಪೂಜೆ ದೇವರು ಎಂದೆಲ್ಲಾ ಭಯವಿದ್ದ ನಮಗೆ ಏನಾದರೂ ಆಗಿಬಿಟ್ಟರೆ ಅಂತ ಹೆದರಿಕೆಯಿತ್ತು. ಕೊಡಿ ಎಂದು ಹೇಳಿದ ಆತ ಅವರ ಆ ಜನಿವಾರವನ್ನು ಹಿಡಿದು ಗದ್ದೆ ಬದು ದಾಟಿ ಕೆರೆಯ ಬಳಿ ನಡೆದೇ ಬಿಟ್ಟ. ಮಂಜರು ಜನಿವಾರ ಇಲ್ಲದೇ ಮನೆಗೆ ಹೋದರೆ ಮಧ್ಯಾಹ್ನ ಊಟಕ್ಕೆ ತೊಂದರೆಯಾದೀತು ಎಂದೆಣಿಸಿ ಅದನ್ನು ಅವನಿಂದ ವಾಪಾಸ್ಸು ಪಡೆದುಕೊಂಡು ದುರ್ದಾನ ಪಡೆದವರ ಹಾಗೆ ಹೊರಟೇ ಬಿಟ್ಟಿದ್ದರು, ಈತ ಮಹಾ ಯುದ್ಧವನ್ನೇ ಗೆದ್ದವರ ಹಾಗೆ ಖುಷಿಯಲ್ಲಿ ನಮ್ಮ ಕಡೆ ಹೆಜ್ಜೆ ಹಾಕಿದ್ದ.


ಹೊಲ ಗದ್ದೆ ಗಳ ಬದುವಿನ ಮೇಲೆ ಬೆಳ್ಳಂಬೆಳಗ್ಗೆ ಆ ಚುಮುಚುಮು ಚಳಿಯಲ್ಲಿ ನಡೆವ ಮಜವೇ ಬೇರೆ. ಹಸಿರೇ ಮೈವೆತ್ತು ನಿಂತಿದ್ದ ಪ್ರಕತಿಯ ಸೊಬಗು, ಮರಗಳ ಮೇಲಿನ ಹಕ್ಕಿಗಳ ಚಿಲಿಪಿಲಿ, ಹಸುಗಳ ಅಂಬಾ..... ನಮ್ಮ ಬದಿಕಿನ ಏಕತಾನತೆಯಲ್ಲಿ ಇದು ಮಾತ್ರ ನಿತ್ಯ ನಯನ ಮನೋಹರ ನಿತ್ಯ ನೂತನ. ಕಡೆಗೋಡ್ಲು ಶಂಕರ ಬಟ್ಟರ ಹಾಡು "........ ಜೀವದ ತುರುಗಳ ಮೇವುಗಳು.." ನೆನಪಾಯ್ತು.

ಹೊರಟು ನಿಂತೆವು ಬೆಳಗಿನ ತಿಂಡಿಯ ಪರಿವಿಲ್ಲದೇ ಬುತ್ತಿಯಲ್ಲಿ ಕಟ್ಟಿಕೊಂಡಿದ್ದು, ಆಗ ನೀರಿನ ಪರಿವೆಯಿರಲಿಲ. ದಾರಿಯಲ್ಲಿ ಸಿಗುವ ಚೇತೋಹಾರೀ ನದಿ ನೀರೇ ಈಗಿನ ಬಿಸ್ಲೆರಿ ಹೊರಡುತ್ತಿದ್ದ ಹಾಗೇ ರಾಮ ನನ್ನ ಕಿವಿಯಲ್ಲೇ ಪುಸುಗುಟ್ಟಿದ್ದ. ಶೀನನ ಕೈಚೀಲದಲ್ಲಿದೆ ಸರ್ಪ್ರೈಸ್. ಸಾಧ್ಯವಾದರೆ ನಾವು ಗುರಿ ಮುಟ್ಟುವ ಮೊದಲು ಗೊತ್ತಾಗುತ್ತೋ ನೋಡು ಎಂದಂದು ನಮ್ಮ ಕುತೂಹಲ ಹೆಚ್ಚಿಸಿಯೇ ಬಿಟ್ಟ. ಆ ಡಾಂಬರು ರಸ್ತೆಯಲ್ಲಿ ಆಗೊಮ್ಮೆ ಈಗೊಮ್ಮೆ ಚಲಿಸುತ್ತಿರುವ ವಾಹನಗಳು ಬೆಳಗಿನ ಚುಮುಚುಮು ಚಳಿಯಲ್ಲೂ ಆಗಾಗ್ಗೆ ಬಿಸಿ ಮುಟ್ಟಿಸುತ್ತಿದ್ದವು. ರಸ್ತೆಯ ಪಕ್ಕದಲ್ಲೇ ಉದ್ದಾನುದ್ದಕ್ಕೆ ಬೀಳಲೆಬ್ಬಿಸಿ ನಿಂತ ವಿದ್ಯುತ್ ಕಂಬಗಳಿಗಂಟಿಕೊಂಡ ಕಾಗೆಯಾಕಾರದ ಪ್ಲಾಸ್ಟಿಕ್ ಹಾಗೂ ಪ್ಲಾಸ್ಟಿಕ್ನಂತಾದ ಕಾಗೆಯ ಕಳೇಬರ, ಪಕ್ಕದಲ್ಲಿದ್ದ ಗದ್ದೆ ಬಯಲು ನಡೆದ ಆಯಾಸ ಪರಿಹರಿಸಲೋಸುವೋ ಎಂಬಂತಿದ್ದ ಮೌರಿಗಳು, ನಮೆಲ್ಲರ ಉತ್ಸಾಹಕ್ಕೆ ಕೂರನೂ ಅಲ್ಲಲ್ಲಿ ಬರುತ್ತಿರುವ ಮೌರಿಯ ರಸ್ತೆಗಡ್ಡಲಾಗಿದ್ದ ಪೈಪ್ನೊಳಕ್ಕೆ ಈ ಕಡೆಯಿಂದ ನುಗ್ಗಿ ಆ ಕಡೆಯಿಂದ ಹೊರಬರುತ್ತಿತ್ತು.

ನೋಡನೋಡುತ್ತಿದ್ದಂತೆ ಮಾನವ ನಿರ್ಮಿತ ಕಪ್ಪು ಡಾಮರು ರಸ್ತೆಯನ್ನು ಬಿಟ್ಟು ನಾವು ಹಸಿರೇ ಉಸಿರಾದಂತಿರುವ ಗದ್ದೆ ಬಯಲುಗಳತ್ತ ನಡೆದು ಪ್ರಕೃತಿಯ ಸುರಮ್ಯ ನಿರಂತತೆಯ ಸೌಂದರ್ಯದ ಬದುಕಿನ ಹಾಡಿಯೊಳಕ್ಕೆ ನುಗ್ಗಿದೆವು. ಮಧುರ ಘಮಲಿನ ಮರಗಿಡ ಬಳ್ಳಿಗಳಿಂದಾವೃತವಾದ ಕಾಡಿದು. ಸುತ್ತಲ ಮನೋರಮ ಹಸಿರಿನ ನಡುವೆ ಪಾದಚಾರೀ ಮಾರ್ಗ. ಇದಿರಿಗೇ ಕಾಣುತ್ತಿದ್ದವು ಚಾಂಪಿ ಮತ್ತು ಮುರಿಹಣ್ಣಿನ ಮರಗಳು. ಒತ್ತೊತ್ತಾಗಿದ್ದ ಗೆಲ್ಲು( ಟೊಂಗೆ) ಗಳಲ್ಲಿ ಕೆಂಫು ಗುಲಾಬಿ ಹಸಿರು ಬಣ್ಣಗಳ ಮಾಗಿದ, ದೋರೆ ಮತ್ತು ಪೀಚುಕಾಯಿಗಳು ಸ್ವಲ್ಪ ಕುಳ್ಳಾಗಿಯೇ ಇದ್ದ ದೊಡ್ಡ ಗಾತ್ರದ ಮರ, ಇದರ ಕಾಂಡಗಳಲ್ಲಿದ್ದ ಚೂಪಾಗಿರುವ ಮುಳ್ಳುಗಳೇ ಹಣ್ಣು ಕೊಯ್ದು ತಿನ್ನುವ ಆಸೆಯಲ್ಲಿನ ಸಮಸ್ಯೆ. ಪ್ರಕೃತಿಯ ನೈಜ ಸೋಜಿಗವಿದು. ಉದ್ದಕ್ಕೆ ಬೆಳೆದ ಮುರಿನ ಮರವನ್ನು ಬಗ್ಗಿಸಿ ನನಗೆ ಬೇಕಾದಷ್ಟು ಮುರಿನ ಹಣ್ಣುಗಳನ್ನು ನನ್ನ ಜೋಳಿಗೆಯಲ್ಲಿ ತುಂಬಿಸಿಕೊಂಡೆ,ಹುಳಿಸಿಹಿ ರುಚಿಯ ಮುರಿನ ಹಣ್ಣು ಬೇಸಗೆಯಲ್ಲಿ ಒಳ್ಳೆ ವಿಟಾಮಿನ್. ತಿನ್ನುವುದೂ ಅರಗಿಸಿಕೊಳ್ಳುವುದೂ ಸುಲಭ. ನಡಿಗೆಯ ಆಯಾಸವೂ ತಿಳಿಯದಂತಾಗಿತ್ತು ನಮಗೆಲ್ಲಾ ಹಸಿರು ದೇವತೆಯ ಮಡಿಲಲ್ಲಿ. ಇಷ್ಟರಲ್ಲೇ ಎರಡೆರಡು ಬಾರಿ ರಾಮ ಮತ್ತು ಗಣಪ ಶೀನನ ಚೀಲವನ್ನು ತೆಗೆದು ಅದರಲ್ಲಿ ಏನೇನಿದೆ ಅಂತ ತಿಳಿಯುವ ವ್ಯರ್ಥ ಪ್ರಯತ್ನ ನಡೆಸಿಯಾಗಿತ್ತು. ಕಾನನದ ಪಕ್ಕದಿಂದ ಕಾಡನ್ನು ಒಂದು ನಮೂನೆಯಲ್ಲಿ ಸವರಿ ದೊಡ್ಡ ವಿದ್ಯುತ್ ಲೈನ್ ನ ಪಿರಮಿಡ್ ಆಕಾರದ ಸ್ತಂಭ್ಹಗಳು ಪ್ರಕೃತಿಯ ಸೋಜಿಗಕ್ಕೆ ಮನುಷ್ಯನ ಪ್ರಯತ್ನದ ಸವಾಲನ್ನು ಸ್ವೀಕರಿಸಿದಂತಿದ್ದುದು ಕಾಣಬಹುದಿತ್ತಾದರೂ ಪ್ರಕೃತಿಯ ಒಡಲಿನ ರಹಸ್ಯವಿನ್ನೂ ಜೀವಂತವಾಗಿತ್ತು.

ಕಾಡಿನ ದಾರಿಯಲ್ಲಿ ನಡೆಯುವಾಗ ತಲೆಯೆತ್ತಿ ನಿಂತ ಚಿತ್ರ ವಿಚಿತ್ರ ಆಕಾರದ ಮರಗಳು ಕೆಲವೊಮ್ಮೆ ಗಲಿಬಿಲಿಯ ವಾತಾವರಣವನ್ನೂ ಹುಟ್ಟು ಹಾಕುತ್ತವೆ. ಕಿಸ್ಕಾರ ಸಳ್ಳೆ ಬಿರ್ಕಿನ ಹಣ್ಣುಗಳನ್ನು ಹುಡುಕಿ ಮೆಲ್ಲುತ್ತಾ ಮುಂದುವರಿಯುತ್ತಿದ್ದೆವು. ಗುಡ್ಡ ಇಳಿದರೆ ಬಯಲು. ಮನೆ ಗಳ ಇದಿರು ಹಿಂದೆ ಹಿತ್ತಿಲಲ್ಲಿ ಬೆಳೆದ ತೊಂಡೆ ಹಣ್ಣು ಅಮಟೆ ಹಣ್ಣು ಗಳನ್ನು ಕೊಯ್ದು ಹೊರಡುವಾಗ ಶೀನನಿಗೆ ಚಿಗುರು ಸೌತೆ ಕಾಯಿ ಕಾಣಿಸಿತು. ಕೊಯ್ದು ತುಂಬಿಸಿಕೊಂಡ ಜೋಳಿಗೆಗೆ. ಆಗಲೇ ಏನೋ ಸದ್ದಾಯ್ತು. ಇಂತವಕ್ಕೆಲ್ಲಾ ಎಚ್ಚರವಿದ್ದ ಆತ ಓಡಿ ಅಂತ ಎಚ್ಚರಿಸಿ ಓಡಿಯೇ ಬಿಟ್ಟ. ಇದರಲ್ಲೆಲ್ಲಾ ನನ್ನೊಬ್ಬನನ್ನು ಬಿಟ್ಟು ಬಾಕಿ ಎಲ್ಲರೂ ಚುರುಕೇ. ಹೊಂಡ, ಬದುವಿನ ವಿಚಿತ್ರ ಕಾಂಬಿನೇಶನ್ ನಲ್ಲಿ ಓಡಲಾಗದೇ ಜಾರಿ ಬಿದ್ದಿದ್ದೆ, ಹಿಂದೆಯೇ ಬಂದಿತ್ತು ನಮ್ಮನ್ನೆಲ್ಲಾ ಹೆದರಿಸಿ ಓಡಿಸಿದ್ದ ಒಂದು ಕರಿ ನಾಯಿ, ಇನ್ನೇನು ನನ್ನ ಮೀನ ಕಂಡಕ್ಕೆ ಬಾಯಿ ಹಾಕಬೇಕು ಅಷ್ಟರಲ್ಲಿ ಟಕ್ ಅಂತ ಸದ್ದು, ನೋಡ ನೋಡುವಷ್ಟರಲ್ಲಿ ನನ್ನ ಹಿಂದಿದ್ದ ನಾಯಿ ಕಂಯಕ್ ಕುಂಯ್ಕ್ ಅನ್ನುತ್ತಾ ನಾಗಾಲೋಟದಲ್ಲಿ ಬಂದ ದಾರಿಯಲ್ಲೇ ಹಿಂದೆ ಓಡಿತು. ಈ ಕಡೆ ತಿರುಗಿದರೆ ಮುತ್ತ ನ ಕೈಯಲ್ಲಿ ಕಂಡಿತ್ತು ಕವಣೆ. ಗುರಿಯಲ್ಲಿ ಅವನಿಗೆ ಸಾಟಿ ಅವನೇ. ನಾನು ಏಳುವುದು ಸ್ವಲ್ಪ ಮೊದಲಾಗಿದ್ದರೂ ಅದು ನನಗೇ ತಾಗುತ್ತಿತ್ತು. ಕೇಳಿದ್ದಕ್ಕೆ ಹಾಗೆಲ್ಲಾ ಅಪುಕೆ ಸಾಧ್ಯವೇ ಇಲ್ಲ ಬಿಡಿ ಎಂದಿದ್ದ ಶೀನ ನಗುತ್ತಾ, ತಮ್ಮನ ಗುರಿಯ ಬಗ್ಗೆ ಅವನಿಗೂ ಅಭಿಮಾನ.

ನಾವೆಲ್ಲಾ ಓಡುತ್ತಾ ನಡೆಯುತ್ತಾ ನಲಿಯುತ್ತಾ ಕಾಲು ದಾರಿಯನ್ನು ನಡಿಗೆಯಲ್ಲಿ ಸವೆಸಿದೆವು ಅರ್ಧ ದಾರಿಕ್ರಮಿಸಿದ ನಂತರ ಸಿಕ್ಕಿತು, ಮರಗಳ ತೋಪಿನ ನಡುವೆ ದೊಡ್ದ ಕಲ್ಲು ಬಂಡೆಗಳೆಡೆಯಿಂದ ಜುಳು ಜುಳು ಹರಿಯುವ ಚಕ್ರ ನದಿ . ಮರಗಳ ನೆರಳಲ್ಲಿ ವಿಶ್ರಮಿಸೋಣವೆಂದ ಸೀನ, ಕುಳಿತು ತನ್ನ ಬೀಣಿ ಚೀಲದಿಂದ ಹೊರ ತೆಗೆದ, ತನ್ನ ಮೊದಲನೇ ಸರ್ಪ್ರೈಸ್. ನಾವೆಲ್ಲಾ ಬಿಟ್ಟ ಬಾಯಿಯಿಂದ ನೋಡುತ್ತಲೇ ಇದ್ದರೆ ಏನನ್ನೋ ನೋಡಿ ನೆನಪಾದ ಹಾಗೆ ಈಗ ಬರುತ್ತೇನೆ ಎಂದು ಹೇಳಿ ಮರಗಳ ನಡುವೆ ಎಲ್ಲಿಯೋ ಮಾಯವಾಗಿ ಬಿಟ್ಟ. ಅವನ ಪ್ಯಾಕೆಟ್ ನೋಡೋಣ ವೆಂದು ಕೊಂಡರೆ ಕೆಂಗಣ್ಣಿನ ಕೂರ ನಮ್ಮನ್ನೆಲ್ಲಾ ಬಾಯಿತೆರೆದು ನಾಲಿಗೆ ಚಾಚಿ ಹೆದರಿಸುತ್ತಿತ್ತು.

ಅದೆತ್ತಲಿಂದಲೋ ಪುನ ಕೈಯಲ್ಲಿ ಒಸರುತ್ತಿರುವ ಜೇನಿನ ಹುಟ್ಟು ಹಿಡಿದು ಪ್ರತ್ಯಕ್ಷನಾಗಿದ್ದ ಅದರ ಜತೆಯಲ್ಲೇ ಜೇನು ನೊಣಗಳ ಝೇಂಕಾರವೂ.ಅರೇ ಅದೆಲ್ಲಿ ಸಿಕ್ಕಿತು ಇದು ಎಂದರೆ ದಾರಿಯಲ್ಲಿ ಜೇನು ನೊಣ ಹಾರುವುದ ನೋಡಿದ್ದೆ. ಒಂದು ನೇರಳೆ ಮರದ ಪೊಟರೆಯಲ್ಲಿತ್ತು.,ಏನೂ ಹೆದರಬೇಡಿ ಕಚ್ಚುವ ಜಾತಿಯವಲ್ಲ ಇದು ಮಿಶ್ರಿ ಜೇನು ಬಹಳ ರುಚಿ ಇರತ್ತೆ ಎಂದ ನನಗೆ ಆಗಲೇ ನೆನಪಾಯ್ತು ನಾನು ತಂದ ದೋಸೆಗೆ ಇದು ತಕ್ಕ ಜೋಡಿ ಅಂತ. ಕ್ಷಣದಲ್ಲೇ ಅದೆಲ್ಲಾ ಚಪ್ಪರಿಸಿ ಬಿಟ್ಟೆವು. ನಮ್ಮ ಕುತೂಹಲ ಜಾಸ್ತಿ ಮಾಡುತ್ತ ಶೀನ ತನ್ನ ಮೊದಲನೇ ಪ್ಯಾಕೆಟ್ ಬಿಚ್ಚಿದ. ಅದರಲ್ಲೊಂಡು ಸಿಗರೇಟ್ ಪೆಟ್ಟಿಗೆ ಮತ್ತು ಬೆಂಕಿ ಪೊಟ್ಟಣ ವಿತ್ತು. ಅದರಿಂದ ಒಂದು ಸಿಗರೇಟ್ ತೆಗೆದು ಬೆಂಕಿ ಹಚ್ಚಿ ನನ್ನ ಕೈಗಿಡಲು ಬಂದ. ಏಯ್ ಪುಳಿಚಾರ್ ನಿನಗೆಂದೇ ತಂದದ್ದು ಇದು ಮೇಲೆ ಹೋಗಿ ಅವನಿಗೆ ( ಮೇಲೆ ತೋರಿಸಿ) ಏನು ಹೇಳ್ತೀಯಾ ಅಂತಂದು ಬಿಟ್ಟ. ರಾಮ, ಮುತ್ತ, ಎಲ್ಲರೂ ನನ್ನನ್ನೇ ನೋಡುತ್ತ ಅಣಕಿಸುತ್ತಿದ್ದಾರೆನಿಸಿ ಬೇಡವೆಂದೆ. ಆದರೂ ಈ ಎಲ್ಲರ ಒತ್ತಾಯದ ಮೇರೆಗೆ ತೆಗೆದುಕೊಂಡು ಬಾಯಲ್ಲಿಟ್ಟು ಎಳೆದೇ ಬಿಟ್ಟೆ ದಮ್ಮು. ನೋಡಿ.....ಬಂತು ಒತ್ತೊತ್ತಿ ಕೆಮ್ಮು,ನಾಲಗೆ, ಗಂಟಲೆಲ್ಲಾ ಒಣ ಉರಿ ಹತ್ತಿ ನೀರು ಅಮ್ಮಾ ಎಂದು ಕೂಗಿದೆ ಗಂಟಲನ್ನು ಕೈಯ್ಯಲ್ಲಿ ಒತ್ತಿ ಹಿಡಿದು. ನೀರು ಪಕ್ಕದಲ್ಲಿಯೇಇದೆಯಲ್ಲಾ, ಮುತ್ತ ಬೊಗಸೆಯಲ್ಲಿ ನದಿಯ ನೀರು ತಂದ ಕುಡಿದೆ. ಏನಾಗೋಲ್ಲ ಸೇದು ಎಂಬ ಒತ್ತಾಯ ಬೇರೆ.




ಹಸಿರು ಚಿಮ್ಮುವ ವಾತಾವರಣ ಮುಗಿದು ಮುಂದಿನ ಗುಡ್ಡ ಹತ್ತಲು ಮುಂದಾಯಿತು ನಮ್ಮ ತಂಡ. ಯಾವಾಗ ನಾನೂ ಅವನೂ ಗಣಪನೂ ಗುಡ್ಡದ ಮೇಲಿನ ಹೆಬ್ಬಲಸಿನ ಮರದಲ್ಲಿ ತೂಗಾಡುವ ಅರಶಿನ ಮಿಶ್ರಿತ ಹಸಿರು ಹಣ್ಣುಗಳನ್ನು ನೋಡಿದೆವೋ ಕೈಯಲ್ಲಿದ್ದ ಚೀಲವನ್ನು ಎಲ್ಲೆಂದರಲ್ಲಿ ಬಿಸಾಡಿ ಅವರಿಬ್ಬರೂ ಓಡಿ ಹತ್ತಲು ತೊಡಗಿದರು. ಬೋಳು ಬೋಳು ಎತ್ತರೆತ್ತರ ಬೆಳೆದ ಆ ಮರ ದಟ್ಟ ಎಲೆಗಳ ಬ್ರಹದ್ ವೃಕ್ಷವಾಗಿತ್ತು. ಅದನ್ನು ನೋಡುವುದೇ ಒಂದು ಸೊಗಸು. ಬೆಳೇದ ದಿವ್ಯಲಸಿನ ಕಾಯಿಯ ಗಾತ್ರದ ಹಣ್ಣುಗಳು ಮರದ ಹರಡಿದ ಕಾಂಡಗಳಲ್ಲಿ ಎಲ್ಲೆಂದರಲ್ಲಿ ಮೋಹಕವಾಗಿ ತೂಗಾಡುತ್ತಿದ್ದವು. ಬೋನಸಾಯ್ ಹಲಸಿನ ಹಣ್ಣಿನಹಾಗೇ ಇರುವ ಹಣ್ಣುಗಳು ಮುಳ್ಳುಗಳಿಂದ ಆವ್ರತವಾಗಿದ್ದು ಅದರ ಮೇಣದ (ಸೊನೆಯಿಲ್ಲದೇ ) ಗೋಜಿಲ್ಲದೇ ಬಿಡಿಸಲೂ ಮೆತ್ತಗಾಗಿದ್ದು ಹುಳಿ ಮಿಶ್ರಿತ ತೊಳೆಗಳು ತುಂಬಾ ರುಚಿಯಾಗಿರುತ್ತವೆ. 

ಅವರು ಮರ ಹತ್ತುವುದನ್ನೇ ಕಾಯುತ್ತಿದ್ದ ನಾನು ಶೀನನ ಚೀಲವನ್ನು ಎತ್ತಿಕೊಂಡು ಹತ್ತಿರದ ಪೊದೆಯತ್ತ ಹೆಜ್ಜೆ ಹಾಕಿದೆ.ಶೀನನ ಸರ್ಪ್ರೈಸ್ ನನ್ನ ತಲೆ ತಿನ್ನುತ್ತಿತ್ತು. ರಾಮನೂ ನನ್ನ ಮನದಿಂಗಿತವರಿತು ಅಡ್ದ ನಿಂತ. ಚೀಲದಲ್ಲಿ ಪೇಪರಿನಲ್ಲಿ ಸುತ್ತಿಟ್ಟ ಎರಡು ಪೊಟ್ಟಣ ಕಂಡೆ, ಒಂದು ಉದ್ದವಾಗಿತ್ತು, ಅದರಲ್ಲಿ ಕೊಳವೆಯಾಕಾರದ ಉದ್ದದ ವಸ್ತುಗಳಿದ್ದವು. ಇನ್ನೊಂದು ಚಿಕ್ಕ ಪೊಟ್ಟಣ. ನನ್ನ ಕೈ ಮೊದಲು ದೊಡ್ಡದನ್ನೇ ತೆಗೆಯಿತು ಇನ್ನೇನು ಮೇಲಿನ ಪೇಪರ್ ಹರಿಯಬೇಕು ಡಬ್ ಅಂತ ಶಬ್ದ ವಾಯ್ತು .ನನ್ನೆದುರೇ ಒಂದು ಹಣ್ಣೂ ನೆಲಕ್ಕೆ ಬಿದ್ದು ಪಚ್ಚಡಿಯಾಯ್ತು. ನೋಡುತ್ತೇನೆ.......... ಇದಿರಲ್ಲಿ ಶೀನ. ನನ್ನ ಬಾಯ ಪಸೆ ಆರಿತು ಪಕ್ಕದಲ್ಲೇ ಕೆಂಗಣ್ಣ ಕೂರ. ಅದರ ನಾಲಗೆ ನನ್ನನ್ನೇ ಅಣಕಿಸುವಂತಿತ್ತು. ಹೆಚ್ಚು ಕಮ್ಮಿ ನನ್ನ ಕೈಯ್ಯಿಂದ ಕಸಿದೇ ಬಿಟ್ಟಿದ್ದನಾತ ತನ್ನ ಚೀಲವನ್ನು.





ಉದ್ದಕ್ಕೂ ಕಾಣುತ್ತಿದ್ದ ಕಂಬಳದ ಗದ್ದೆ ನಾವು ನಿಂತ ಬದುವಿನಿಂದ ಎತ್ತರಕ್ಕೆತ್ತರಕ್ಕೆ ಬೆಳೆದ ತೆಂಗಿನ ಅಡಕೆಯ ಮರಗಳು ಗಾಳಿಗೆ ತಲೆವಾಗುತ್ತಿರುವಾಗ ಕೆಳಗೆ ಗದ್ದೆಯ ತಿಳಿನೀರಿನಲ್ಲಿ ಅವುಗಳಂತೆಯೇ ಇದ್ದ ಸುಂದರ ಪಡಿಯಚ್ಚು. ದೂರದಲ್ಲಿ ಗದ್ದೆಯ ಹಸಿರು ಹುಲ್ಲು ಮೇಯುತ್ತಿರುವ ತುರು ಮಂದೆಗಳು. ಲಾಲಿತ್ಯದ ಬೆಡಗು. ಗದ್ದೆಯ ಅಂತ್ಯದಲ್ಲೇ ಬದುವಿನುದ್ದಕ್ಕೂ ಹರಿಯುತ್ತಿರುವ ಒಂದು ನೀರಿನ ತೋಡು (ಸಣ್ಣ ತೊರೆ) ಅದರ ಮೇಲೆ ಬದುವಿನಿಂದ ಮುಂದಿನ ದಾರಿಯಾಗಿ ಒಂದು ಸಂಕ ( ಚಿಕ್ಕ ಅಡಿಕೆ ಮರದಿಂದ ನಿರ್ಮಿತವಾದ ಸೇತುವೆ) ಅಲ್ಲಿಂದಲೇ ಗುಡ್ಡ ಆರಂಭ.ಗುಡ್ಡವಿಳಿದರೇ ನಮ್ಮ ಗಮ್ಯವೆಂದ ಶೀನ. ಆಕಡೆಯಿಂದ ಮರಗ ತೋಪಿನ ಮೇಲಿನಿಂದ ಸುಳಿ ಸುಳಿಯಾಗಿ ಏಳುತ್ತಿರುವ ಹೊಗೆಯನ್ನು ನೋಡಿದಾಗಲೇ ನನಗೆ ಅವನ ಮೂರನೆಯ ಸರ್ಪ್ರೈಸ್ ನನಗೆ ಹೊಳೆಯಿತು. ನಾನು ಅತೀ ಎಚ್ಚರಿಕೆಯಿಂದ ಸಂಕವನ್ನು ದಾಟುತ್ತಿದ್ದರೆ ಮೊದಲೇ ಅದನ್ನು ಚಂಗನೆ ದಾಟಿದ್ದ ಶೀನ ಗಣಪ ಅಣಕಿಸುತ್ತಿದ್ದುದು ಕಂಡು ಬಂತು. ಮುಂದಿದ್ದ ಓಣಿಯನ್ನು ದಾಟಿ ದೊಡ್ಡ ತಾರೆ ಮರವನ್ನು ತಲುಪಿದಾಗ ನನ್ನ ಮೂಗಿಗೆ ಬಡಿದಿತ್ತು ಕಬ್ಬಿನ ರಸ ಬೇಯುತ್ತಿರುವ ಪರಿಮಳ. ನನ ಮೂಗೆಂದೂ ಯಾವುದನ್ನು ಮರೆತರೂ ಇದನ್ನು ಮರೆಯಲಾಗದು. ನನ್ನ ಫೇವರೈಟ್ .. ಅದೇ ಬೆಲ್ಲ ಸಿದ್ಧ ಮಾಡುವ ಮನೆ
ಆಲೆ ಮನೆ.





ಹತ್ತು ಕಿಮೀ ನಡೆದ ಆಯಾಸ ಕ್ಷಣದಲ್ಲಿ ಮರೆಯಾಯ್ತು ಹೇಳ ಹೆಸರಿಲ್ಲದೇ ಹಾರಿ ಹೋಯಿತು.ದಪ್ಪವಾದ ದೊಡ್ಡ ದೊಡ್ಡ ಕವಲು ಮರದ ಎಲೆಗಳನ್ನು ಮಡಿಸಿ ದೊಣ್ಣೆಯನ್ನಾಗಿಸಿಕೊಂಡು ಗುಡ್ಡದ ತಪ್ಪಲಿಂದ ಇಳಿದು ನಾವೆಲ್ಲರೂ ಅಲ್ಲಿಗೆ ಹೆಚ್ಚು ಕಮ್ಮಿ ಓಡಿಯೇ ಬಿಟ್ಟೆವು. ಇದಿರು ಕಾಣುತ್ತಿರುವ ರಾಶಿ ರಾಶಿ ಕಬ್ಬಿನ ಜಲ್ಲೆಗಳು ಒಂದೆಡೆಯಾದರೆ ಗಾಣದಿಂದ ಚಪ್ಪಡಿಯಾಗಿ ಹೊರ ಬರುತ್ತಿದ್ದ , ಬಂದಿದ್ದ ಕಬ್ಬಿನ ರಾಶಿ ರಾಶಿ ಸಿಪ್ಪೆಗಳು ಇನ್ನೊಂದೆಡೆ. ಉರುಟಾದ ದೊಡ್ಡ ದೊಡ್ಡ ಎರಡು ಒಲೆಗಳ ಉರಿಯುತ್ತಿರುವ ಬೆಂಕಿಯ ಮೇಲೆ ದೊಡ್ಡದಾದ ಎರಡು ಕೊಪ್ಪರಿಗೆಗಳು ಒಂದರಲ್ಲಿ ಬೇಯುತ್ತಿದ್ದ ಕಬ್ಬಿನ ಹಾಲು ಹಾಗೂ ಮತ್ತೊಂದರಲ್ಲಿ ಬಿಳಿ ಬಿಳಿ ನೊರೆಯೇಳುತ್ತಿರುವ ಬೆಲ್ಲವಾಗುತ್ತಿರುವ ಕಬ್ಬಿನ ರಸ . ಇವೆಲ್ಲವನ್ನು ನೋಡಿಯೇ ಭುಗಿಲೆದ್ದ ಉದರಾಗ್ನಿ ತಣಿಸಲು ಹಬೆಯಾಡುವ ನೊರೆಬೆಲ್ಲ ತಿನ್ನಲು ಕುಳಿತೆವು, ನಮ್ಮ ಉದರ ತುಂಬಿದಾಗಲೇ ಕೊನೆಯ ಸರ್ಪ್ರೈಸ್ ನೆನಪಾಗಿದ್ದು. ಯಾವ ಮಾಯದಲ್ಲೋ ಶೀನ ತಾನು ತಂದಿದ್ದ ಚೀಲದಿಂದ ತೆಗೆದ ವಸ್ತುವನ್ನು ನಾವೆಲ್ಲರೂ ನೋಡ ನೋಡುತ್ತಿದ್ದಂತೆಯೇ ಬಿಸಿ ಬಿಸಿಯಾಗಿ ಹಬೆಯಾಡುತ್ತಿದ್ದ ಒಲೆಯ ಕಡೆಗೆ ತೂರಿದ. ಅದು ಹೋಗಿ ಕೊಪ್ಪರಿಗೆಯೊಳಕ್ಕೆ ಬಿತ್ತು.