Search This Blog

Wednesday, April 8, 2015

ಗ್ರಾಮ್ಯ ಜೀವನ ಮತ್ತು ಸಾಹಿತ್ಯ..


ಹಳ್ಳಿ ಕಡೆಯ ತಮಾಷೆಯ ಮಾತುಗಳು ಗ್ರಾಮ್ಯ ಜೀವನದ ಪ್ರತಿ ಚಟುವಟಿಕೆಗಳಲ್ಲಿ ಹಾಸುಹೊಕ್ಕಾಗಿರುತ್ತವೆ.
ಅಲ್ಲಿನ ಜನ ಜೀವನವೂ ಮತ್ತು ಸಾಹಿತ್ಯ ಜನ ಜೀವನದ ಅವಿಭಾಜ್ಯ ಅಂಗವಾಗಿರುತ್ತವೆ.
ಅಲ್ಲಿನ ಜಾನಪದ ಹಾಡುಗಳು ಪ್ರತಿ ಚಟುವಟಿಕೆಯ ಮೇಲೂ ಇವೆ. 
ಮನುಷ್ಯ ಮಾತ್ರರ ನಡೆವಳಿಕೆಯ ಮೇಲೂ ಅಷ್ಟೇ ಚೆನ್ನಾದ ಹಾಡುಗಳಿವೆ.
ಹೀಗೊಂದು ಹಾಡಿದೆ
ಅಕ್ಕಿ ತೊಳುವರ ಕೈಲಿ
ಬೈಣಿ ಮುಳ್ಳ್ಹೆಟ್ಟಿತೂ
ನಾತೊಳು ಬತ್ತ ನಂದಲ್ಲ //೨//
ನೆಂಟರೇ ಹೊತ್ತಿದಲ್
ಹೊಳೆಯ ದಾಟ್ಕಣಿ


ಸನ್ನಿವೇಶ ನೋಡಿ. ಈ ಹೆಂಗಸು ಪಕ್ಕದ ಮನೆಯಲ್ಲಿ ಬತ್ತ ಕುಟ್ಟಲು ಹೋಗಿದ್ದಾಳೆ.
ಆಗ ಅವರ ಮನೆಗೆ ಅವರ ನೆಂಟರ್ಯಾರೋ ಬಂದಿದ್ದಾರೆ.
ಈ ಸೂಚಕ ಮಾತು ಅವರಿಗೂ ತಗಲಲಿ ಅಂತ ಹೇಳುವ ರೀತಿ ನೋಡಿ.
ಬತ್ತ ಕೈಯ್ಯಲ್ಲೇ ಕುಟ್ಟಿ ಅಕ್ಕಿ ಮಾಡಲು ಬೈಣಿ ಮರದ ಒನಕೆ ಉಪಯೋಗಿಸುತ್ತಾರೆ.
ಅದರಲ್ಲಿ ಸ್ವಲ್ಪ ಜಾಸ್ತಿ ಉಪಯೋಗಿಸಿದಾಗ ಅಲ್ಲಲ್ಲಿ ಮುಳ್ಳು ( ನಾವು ಅದನ್ನ ಶಿಬಿರು ಎನ್ನುತ್ತೇವೆ) ಏಳುತ್ತವೆ.
ಮನೆಯಲ್ಲಿ ಅಕ್ಕಿ ಇಲ್ಲ ತಾನು ಕುಟ್ಟುತ್ತಿರೋದು ತಮ್ಮ ಮನೆಗಲ್ಲ.
ಸೂರ್ಯ ಬಾನಿನಲ್ಲಿರುವಾಗಲೇ ನೀವು ನಿಮ್ಮ ನಿಮ್ಮ ಮನೆಗೆ ತಲುಪಿಕೊಳ್ಳಿ ಅನ್ನೋ ವ್ಯಂಗ್ಯ.
ಇನ್ನೊಂದು ಹಾಗಿನದ್ದೇ ಹಾಡು. ಗಂಡ ಹೆಂಡಿರ ನಡುವಿನ ಪ್ರೀತಿ ಪ್ರೇಮ ಮತ್ತು ಕೋಪ ಗಳನ್ನು ಒಟ್ಟು ಸೇರಿಸಿ ಮಾಡಿದ್ದು.
ಬೇಗ್ ಬಂದ್ರು ಚಿಕ್ಕಪ್ಪ
ಬಾಗ್ಲು ತೆಗ್ದರು ಚಿಕ್ಕಬ್ಬೆ
ಕಾಫಿ ಎಂದರು ಚಿಕ್ಕಪ್ಪ
ಸೀರೆ ಎಂದಳು ಚಿಕ್ಕಬ್ಬೆ
ಇಲ್ಲೆ ಎಂದರು ಚಿಕ್ಕಪ್ಪ
ಇಲ್ಲೆ ಎಂದಳು ಚಿಕ್ಕಬ್ಬೆ
ಸಿಟ್ಟು ಮಾಡ್ದರು ಚಿಕ್ಕಪ್ಪ
ಮೋರೆ ತಿರ್ವಿದ್ಳು ಚಿಕ್ಕಬ್ಬೆ
ಪೆಟ್ಟು ಕೊಟ್ಟರು ಚಿಕ್ಕಪ್ಪ
ಬಾಮಿಗೆ ಹಾರ್ದಳು ಚಿಕ್ಕಬ್ಬೆ
ಏಣಿ ಇಟ್ಟರು ಚಿಕ್ಕಪ್ಪ
ಹತ್ತಿ ಬಂದಳು ಚಿಕ್ಕಬ್ಬೆ
ಪಟ್ಟಣದ ಧಾವಂತದ ಜೀವನದಲ್ಲಿ ಪಕ್ಕದ ಮನೆಯಲ್ಲಿ ಉಗ್ರವಾದಿಗಳ ಚಟುವಟಿಕೆ ನಡೆಯುತ್ತಿದ್ದರೂ ಗೊತ್ತಾಗದ ರೀತಿಯಲ್ಲಿರುವಾಗ
ಹಳ್ಳಿಯ ಪರಸ್ಪರ ಹೊಂದಿಕೊಡು ಬಾಳುವ ಜನಜೀವನ ಎಂತಹ ಸುಂದರ ಅಲ್ವಾ..?

ಮುಂದೇನು..?



ಗಂಡ : ಡಾಕ್ಟರ್ ಸಾಬ್, ನನ್ನ ಹೆಂಡತಿ ಮೊದಲ ಸಲ ಗರ್ಭಿಣಿಯಾಗಿದ್ದಾಗ ಕರಣ್ ಅರ್ಜುನ್ ಸಿನೇಮಾ ನೋಡಿದ್ದಳು.
ಡಾಕ್ಟರ್ : ಸರಿ. ಅದಕ್ಕೇ..?

ಗಂಡ : ಆ ಸಲ ಅವಳಿಗೆ ಅವಳಿ ಮಕ್ಕಳು ಹುಟ್ಟಿದವು. ಎರಡನೇ ಸಾರಿ ಗರ್ಭಿಣಿಯಾದಾಗ ತ್ರಿಮೂರ್ತಿ ಸಿನೇಮಾ ನೋಡಿದ್ದಳು.
ಡಾಕ್ಟರ್ : ಈ ಸಾರಿ ಏನಾಯ್ತು..?

ಗಂಡ : ಎರಡನೇ ಸಲ ತಿವಳಿಗಳು ಹುಟ್ಟಿದವು ಡಾಕ್ಟರೇ ನಂಗೆ ತುಂಬಾ ಹೆದರಿಕೆಯಾಗುತ್ತಿದೆ.
ಡಾಕ್ಟರ್ : ಯಾಕೆ ಈ ಸಾರಿ ಪುನಃ ಗರ್ಭಿಣಿಯಾದಳೇನು..?

ಗಂಡ : ಹೌದು

ಡಾಕ್ಟರ್ : ಈ ಬಾರಿ ಏನಾಯ್ತು..?

ಗಂಡ : ಅದಲ್ಲ ಡಾಕ್ಟ್ರೇ ಅವಳು ಈ ಬಾರಿ ಅಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರು ಸಿನೇಮ ನೋಡಲು ಹೋಗಿದ್ದಾಳೆ.

ಡಾಕ್ಟರ್ : ಹಾಂ..?

Cartoon Curtsy:  Internet

ಕನಸ ಕದಿಯುವರಿಹರು ಹುಶಾರ್



ಹದಿ ಹರೆಯ ಮನದಲ್ಲಿ
ವಿಷ ಬೀಜ ವಿದಳನ ನಡೆಸಿ
ಕನಸ ಮಾರುವರಿಹರು
ಎಚ್ಚರಿಕೆಯಿರಲೀಗ ಮನ
ಮನೆಯ ಬಳಿಯಿಹರು
ಕನಸ ಕದಿಯುವರಿವರು ಹುಶಾರ್

ನಮ್ಮೆಲ್ಲರ ನಡುವೆಯೇ ಜಗ್ಗನೆದ್ದು
ಉದ್ಭವಿಸೋ ಈ ಅಸುರರು
ಹದಿ ಮನಕೆ ಧಾಂಗುಡಿಯಿಟ್ಟು
ದ್ವೇಶ ದಳ್ಳುರಿ ಬಿತ್ತಿ ಬೆಳೆಸಿ
ಮಾರುವರು ದಳ್ಳಾಳಿಗಳಿಗೆ
ಮನುಕುಲ ಸಂಕುಲದ ವೈರಿಗಳಿಗೆ

ನೆಪಕೆ ಧರ್ಮದ ಹೆಸರ ಲೇಪಿಸಿ
ಹುಚ್ಚು ಆವೇಶದ ದಾಹಕ್ಕೆ ಬಲಿ
ಕೋಟಿ ಕೋಟಿ ಅಮಾಯಕ ಕನಸ ಲೂಟಿ
ಕೊಳ್ಳುಮಾರುವರಿರುವ ಈ ವಿಶ್ವ ಸಂತೆಯಲಿ
ಕನಸ ಕೊಳ್ಳುವವರಿಗೇನು ಬರ

ದೇಶ ಭಾಷೆ ಜಾತಿ ಭೇಧ,
ನ್ಯಾಯ ನೀತಿಗಳಿಲ್ಲದ ಇವರು
ಅದನೆ ಬಿತ್ತಿ ಬೆಳೆಸುವರು ನಮ್ಮ ನಮ್ಮಲ್ಲಿ
ಈ ಭಸ್ಮಾಸುರರು ಅವತರಿಸಿ
ಬೆಳೆಯೋ ಮುನ್ನ ಅವತರಿಸಬೇಕಿದೆ
ವಿಷ್ಣು- ಮೋಹಿನಿಯಾಗಿ

ವಿಶ್ವಕ್ಕೆ ಶಾಂತಿಯನು ಕಲಿಸಿಹೆವು ನಾವು
ಕಲಿಯಬೇಕಿದೆ ಸ್ವಾರ್ಥ ಅಳಿಸೊ ಪಾಠ
ಕೋಟಿ ಕಂಗಳ ಕನಸ ನೆನಸಾಗಿಸಲು
ಗೆಲ್ಲಬೇಕಿದೆ ಈ ಸಮರವನ್ನ
ನಮಗೆ ನಾವೇ ಎಚ್ಚರಿಸ ಬೇಕಿದೆ ಈಗ

ಕನಸು ಕದಿಯುವರಿಹರು ಹುಷಾರ್ 

ಅಳಲು



ಆಗ
ನನ್ನೆಲ್ಲಾ
ಆಸೆ ಆಕಾಂಕ್ಷೆಗಳ
ಹಸಿವು ತ್ರಷೆಗಳ
ಅದುಮಿಕ್ಕಿ ಸಾಕಿದ್ದೆ,
ನನ್ನ
ತುತ್ತನ್ನೂ ನಿನಗಿಕ್ಕಿ,

ಚಿಗುರೊಡೆದ
ಕನಸ ಕಂಗಳಲಿ
ನನ್ನದೂ ಬೆರೆಸಿ
ಬೆಳೆಸಿದ್ದೆ ನಿನ್ನ

ಈಗಲೋ
ಸಮಯವೂ ಉಳಿದಿಲ್ಲ
ನಿನ್ನಲ್ಲಿ ನನಗಾಗಿ
ಇದೆಯಲ್ಲ ನಿನ್ನ ಚಿಣ್ಣ
ನಾಳೆಯ ನೀನಾಗಿ
ನಿನ್ನಾಸೆ ಕನಸಲ್ಲೂ
ಬೆರೆಯಲು

ಆದರೆ ಮಗೂ
ನೀ ಮರೆತ ವಿಷಯವೊಂದಿದೆ
ನಾಳೆ ನೀನೇ ನನ್ನ
ಹಾಗಾದಾಗ
ನಿನ್ನ ಗತಿ

ನನಗೆ ಪರಿಚಿತ ಬಿಡು
ಏಕಾಕೀ ಜೀವನ
ಈ ಒಂಟಿತನ 
ಇರಲಿ
ನಿನಗೂ

ಹಾಗಾಗದಿರಲಿ