Search This Blog

Tuesday, June 17, 2014

ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..


ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..

೧೫ ಜೂನ್ ೨೦೧೪ ರವಿವಾರ ಶ್ರೀಯುತ "ಸತ್ಯೇಶ್ ಬೆಳ್ಳೂರ್" ರವರ ಮನೆಯಲ್ಲಿ

ಕನ್ನಡದ ಆಸ್ತಿ ಡಾಕ್ಟರ್ ಮಾಸ್ತಿಯವರ ನವರಾತ್ರಿ ಕಥನ ಸಂಕಲನ ಈ ಸಾರಿಯ ಅಭ್ಯಾಸದ ಮುಖ್ಯ ಪಾಠ ಪ್ರವಚನ ವಿಷಯವಾಗಿತ್ತು.
ಇವತ್ತಿನ ( ರವಿವಾರ ಜೂನ್ ೧೫ ೨೦೧೪ ರಂದು) ಅಭ್ಯಾಸದಲ್ಲಿ ನಮ್ಮ ಹೆಚ್ಚು ಸವಿ ಡಾ ಎಚೆಸ್ವೀಯವರು ಈ ಸಂಕಲನದ ಮಹತ್ವದ ತಾವೇ ಆರಿಸಿದ ನಾಲ್ಕು ಕಥನಗಳ ಬಗ್ಗೆ ಪ್ರವಚನ ಮಾಡುವರು.
ಇಲ್ಲಿ ನಾನು ಬರೆದ ಲೇಖನದ ಭಾವಾರ್ಥ ಅವರ ಮಾತುಗಳಲ್ಲೇ ತಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ. ಈ ಬರಹಗಳಲ್ಲಿ ನಿಮಗೆ ಹೊಸದೇನಾದರೂ ಗೋಚರಿಸಿದರೆ ಅದು ಅಕ್ಷರಶಃ ಮೇಸ್ಟ್ರದ್ದು,
ನಿಮಗೆ ಇದರಲ್ಲಿ ಏನಾದರೂ ತಪ್ಪು ನುಸುಳಿದ್ದು ಕಂಡು ಬಂದರೆ ಅದು ನನ್ನದು, ದಯವಿಟ್ಟು ನೀವು ಕ್ಷಮಿಸ ಬೇಕು ಯಾಕೆಂದರೆ ನನ್ನ ಉದ್ದೇಶ ಅಭ್ಯಾಸದ ಈ ಪಾಠದ ಉಪಯೋಗ ತಮಗೆಲ್ಲರಿಗೂ ಆಗಬೇಕು ಎಂಬುದೇ.





ಡಾ ಎಚೆಸ್ವೀಯವರು ೪೧ ತಿಂಗಳು ನಡೆದು ಬಂದ ಈ ಅಭ್ಯಾಸದ ಬಗ್ಗೆ ಮಾತನಾಡುತ್ತಾ ಅಭ್ಯಾಸ ಎಂದರೆ ಪಾಠ ಪ್ರವಚನ ಎಂದಿದ್ದರು,
ಅವರವರ ವೃತ್ತಿ ಗಳಲ್ಲಿ ಮುಳುಗಿ ಪ್ರವೃತ್ತಿಯ ಮರೆತ ನನ್ನಂತವರಿಗೆ ಇದೊಂದುಪೂರ್ಣ ಪ್ರಮಾಣದ ಪಾಠ ಶಾಲೆಯಾಗಿಯೇ ಕಾಣುತ್ತದೆ.
ಪೂರ್ತಿ ಕೌಟುಂಬಿಕ ವಾತಾವರಣದಲ್ಲಿ ಈ ಅಭ್ಯಾಸ ತರೋ ಸ್ಪುರಣವೇ ಬೇರೆ.
ಹಲವು ಹತ್ತು ಹಿರಿಯ ತಲೆಮಾರು ಕವಿಗಳನ್ನು ಅವರ ಅನರ್ಘ್ಯ ಕೃತಿಗಳನ್ನು ಅಭ್ಯಸಿಸುವ ಕಲಿಯುವ ಅವಕಾಶ ಪಾಠ ಪ್ರವಚನದಲ್ಲಿ ಅಭ್ಯಾಸದ ವಿಧ್ಯಾರ್ಥಿಗಳದ್ದಾಗಿರುತ್ತದೆ.
ಮಾಸ್ತಿಯವರು ತಮ್ಮ ಬರವಣಿಗೆ ಪಕ್ವವಾದ ಬಳಿಕ ಕವಿತೆ ಬರೆಯಲಾರಂಭಿಸಿದ್ದರು. ಅವರ ಕವಿತೆಗಳು ಸಮಸ್ತರದ ನದಿಯಂತೆ.
ಅವರೇ ಅಂದಂತೆ ಬರವಣಿಗೆಯಲ್ಲಿ ಸಂಗತಿಗಳು ಹೆಚ್ಚಿದ್ದರೆ ಅದು ಕಥನವಾಗುತ್ತದೆ ಮತ್ತು ಭಾವ ಹೆಚ್ಚಿದ್ದರೆ ಅದು ಕವನವಾಗುತ್ತದೆ. ಇದಕ್ಕೆ ಅಪವಾದವೂ ಇವೆ ಆ ಸಂಗತಿ ಬೇರೆ.
ಮಾಸ್ತಿಯವರ ಬರಹಗಳು ವಾಸ್ತವದಲ್ಲಿರುತ್ತವೆ. ಅವರೇ ಹೇಳಿಕೊಂಡಂತೆ ಹಾರಾಡುವ ಸಂಗತಿಗಳನ್ನು ನೆಲಕ್ಕಿಳಿಸಿದವುಗಳು.
ನಮ್ಮ ಮೇಶ್ಟ್ರೇ ಹೇಳಿದಂತೆ ಅವರ ರಾಮಾಯಣದ ಹನುಮಂತ ಸಮುದ್ರವನ್ನು ಈಜಿಕೊಂಡೇ ದಾಟಿದ್ದನಂತೆ. ಶ್ರೀರಾಮ ರಾವಣನೊಂದಿಗಿನ ಯುದ್ಧ ಮುಗಿಸಿ ಸೀತೆಯನ್ನು ಪುಷ್ಪಕ ವಿಮಾನದಲ್ಲಲ್ಲ ಹೇಸರ ಗತ್ತೆಗಳ ರಥದಲ್ಲಿ ಕರೆತಂದಿದ್ದನಂತೆ. ಹೀಗೆ ಮಾಸ್ತಿಯವರ ಸಂಗತಿಗಳೆಲ್ಲವು ವಾಸ್ತವ ಜಗತ್ತಿನ ಸಂಗತಿಗಳೇ ಆಗಿದ್ದು ಬೇರೆ ಕಾವ್ಯಗಳಲ್ಲಿದ್ದಂತೆ ಕಲ್ಪನೆಯ ರಮ್ಯತೆಯನ್ನು ಹೊಂದಿರುವುದಿಲ್ಲ ಬದಲಿವೆ ಅವಕ್ಕೆ ವಾಸ್ತವದ ಹೊದಿಕೆಯಿರುತ್ತದೆ.
ಮಾಸ್ತಿಯವರು ತಮ್ಮ ಜೊತೆಯಸಾಹಿತಿಗಳನ್ನು ಕುರಿತು ವ್ಯಕ್ತ ಪಡಿಸಿರುವ ಆತ್ಮೀಯತೆ ಅವರ ' ನವರಾತ್ರಿ' ಕೃತಿಯಲ್ಲಿಬಹಳ ವಿಷೇಷವಾಗಿ ಕಂಡು ಬರುತ್ತದೆ. ಹಲವು ಹಿರಿಯರು , ಹಲವು ಸಮವಯಸ್ಕರು, ಇನ್ನು ಕೆಲವು ಕಿರಿಯರನ್ನು ಉಲ್ಲೇಖಿಸಿ, ಬಣ್ಣಿಸಿ. ಅವರವರ ಶೈಲಿಗಳನ್ನು ಸುಮಾರು ಹೊಂದಿಸಿ, ಅವರವರುಗಳು ಒರೆದರೆಂಬಂತೆ ಕವನಗಳನ್ನು ಸೃಜಿಸಿ, ಕೆಲವರನ್ನು ಟೀಕೆ ಟಿಪ್ಪಣಿಗಳನ್ನು ಕೊಡಲು ನಿಯಮಿಸಿ ತಮ್ಮದೇ ತಂತ್ರದ ಅತೀ ವಿಶಿಷ್ಟ ೧೯ ಕಥನ ಕವನಗಳನ್ನು ಹೆಣೆದಿದ್ದಾರೆ. ಇವುಗಳನ್ನು ಓದಿದಾಗ ಉಲ್ಲೇಖಿಸಿರುವ ಎಲ್ಲ ವ್ಯಕ್ತಿಗಳೂ ಕಣ್ಣ ಮುಂದೆ ಬರುತ್ತಾರೆ. ಇದೇ ಶೈಲಿಯಲ್ಲಿ ಇನ್ನೂ ಮೂರು ಕಥನಕವನಗಳು ಮಾತ್ರ ( 'ಅರುಣ'- ಮದನ ಲಿಂಗನ ಕಣಿವೆ, 'ತಾವರೆ- ಕನಕದಾಸರ ಕಥೆಗಳು', 'ಸುನೀತ- ಹಲಸಂಗಿ ಜಕ್ಕವ್ವ'). ಅವರ ಬೃಹತ್ ಕಾವ್ಯವಾದ ' ಶ್ರೀರಾಮ ಪಟ್ಟಾಭಿಷೇಕ" ದಲ್ಲಿ ಇದೇ ಕಥನ ಕವನದ ಶೈಲಿಯನ್ನು ಗುರುತಿಸ ಬಹುದು.

ಸಮಾಧಿಯ ತತ್ವದ ಡಾಕ್ಟರೆಂದರೆ ಡಾ ಎಸ್ ಸುಬ್ಬರಾವ್
ಯದುವಿಜಯದ ಟಿಪ್ಪಣಿಕಾರ ಹಿರಿಯಣ್ಣನೆಂದರೆ ಶ್ರೀಯುತ ಭಿ ಎಮ್ ಶ್ರೀಕಂಠಯ್ಯ
ಅಂಗಡಿಯ ಸಾಧುಗಳು- ದಲ್ಲಿನ ಟಿಕಾಕಾರ ವೆಂಕಪ್ಪ ನೆಂದರೆ ಶ್ರೀಯುತ ಟಿ ಎಸ್ ವೆಂಕಣ್ಣಯ್ಯ
ರಾಮಕೃಷ್ಣಯ್ಯರೆಂದರೆ ಶ್ರೀಯುತ ಎ ಆರ್ ಕೃಷ್ಣ ಶಾಸ್ತ್ರಿ
ನಾರದರ ಅನುಭವದ ಸುಬ್ಬಯ್ಯ ರೆಂದರೆ ಡಾ ಎನ್ ಎಸ್ ಸುಬ್ಬರಾವ್
ಮುಸಿಲಮ್ಮದ ರಘುನಾಥಯ್ಯರೆಂದರೆ ಶ್ರೀಯುತ ಕೆ ಎಸ್ ರಾಘವಾಚಾರ್
ಸೋಜಿಗದ್ ಹೊಳಲಿನ ಮಂಗೇಶ ಮಮನೆಂದರೆ ಉಗ್ರಾಣದ ಮಂಗೇಶರಾಯರು.
ಕಪ್ಪೆ ಚೆನ್ನಿಗ ಮೂರ್ತಿಯ ಕೃಷ್ಣಮೂರ್ತಿ ಎಂದರೆ ಶ್ರೀಯುತ ಎಮ್ ಆರ್ ಶ್ರೀನಿವಾಸ್ಮೂರ್ತಿ
ನಾಮ ಮಹಿಮೆಯ ದತ್ತೋಜಿ ಎಂದರೆ ಶ್ರೀಯುತ ದ, ರಾ ಬೇಂದ್ರೆ
ನವರಾತ್ರಿಯ ಪದ್ಯ ಕಥನಗಳ ಗುಚ್ಛ ಮೈಸೂರಿನಲ್ಲಿ ಒಂದು ನವರಾತ್ರಿಯಲ್ಲಿ ನೆರೆದ ಗೆಳೆಯರ ಕಥೆಗಳಿಂದ ರೂಪುಗೊಂಡಿತೆನ್ನುವುದು ಬರಿಯ ಒಂದು ಕಲ್ಪನೆ . ಕಥೆ ಹೇಳಿದವರವು ಮತ್ತು ಟೀಕೆ ಮಾಡಿದವರವು ಎಂದು ಪ್ರಸ್ತವನಾ ಭಾಗದಲ್ಲಿ ಮಾಸ್ತಿಯವರೇ ಸ್ವತ ವ್ಯಕ್ತಿ ಚಿತ್ರಗಳು ತನ್ನ ಜೊತೆಯ ತನಗೆ ಹಿರಿಯರಾದ ಕನ್ನಡ ಸೇವಕರನೇಕರ ಶೀಲವನ್ನು ಆಧರಿಸಿ ಬರೆದಕಲ್ಪಿತ ಚಿತ್ರಗಳು ಎಂದೂ ಅಲ್ಲಿ ಇಲ್ಲಿ ಮಾತು ತಪ್ಪಿದ್ದರೆ ಆಯಾ ಹಿರಿಯರೂ ಗೆಳೆಯರೂ ಮನ್ನಿಸ ಬೇಕು ಎಂತಲೂ ಬರೆದಿದ್ದು ಅವರವಿನಮೃತೆಯನ್ನು ತೋರುತ್ತದೆ.
ನವರಾತ್ರಿ ಮಾಸ್ತಿಯವರ ಮಹಾನ್ ಮಾರ್ಗ ಕೃತಿ. ಮಾಸ್ತಿಯವರು ಮತ್ತು ಅವರ ಸಮಕಾಲೀನ ಲೇಖಕರ ಉದ್ದೇಶ ಬದುಕಿನ ಅನುಕ್ಷಣದ ಸೂಕ್ಷ್ಮ ನೆಲೆಗಳನ್ನು ಅರಸುವವರಿಗೆ ತಿಳಿಸಬೇಕು ಎಂಬುದಾಗಿದೆ.
ಮಾರ್ಗ ಪ್ರವರ್ತಕರಿಗೆ ತಮಗಾಗುವ ಅನುಭವಗಳನ್ನು ತಿಳಿಸಬೇಕು ಹೊಸ ಜನಾಂಗಕ್ಕೆ ಈ ಹೊಳಲುಗಳನ್ನು ಅರಿವಾಗಿಸಬೇಕು, ಆಂಗ್ಲ ಸಾಹಿತ್ಯದ ಮಹಾ ವಿಸ್ತಾರವಾದ ಮಾರ್ಗದಿಂದ ತಾವು ಕಂಡುಕೊಂಡದ್ದನ್ನು ನಮ್ಮಲ್ಲಿ ಕನ್ನಡದಲ್ಲಿ ನೆಲೆಸೋ ಹಾಗೆ ಮಾಡಬೇಕು. ಹೀಗೆ ಕನ್ನಡವೊಂದು ತುಂಬು ಮಾರ್ಗವಾಗಬೇಕು ಎಂಬುದೇ ಅವರೆಲ್ಲರ ಸದ್ದುದ್ದೇಶವಾಗಿತ್ತು.
ಆಂಗ್ಲ ಕವಿ ಚಾಸರ್ ಹದಿನಾಲ್ಕನೇ ಶತಮಾನದಲ್ಲಿ ಹೊಸ ಸಾಹಿತ್ಯದ ಅನ್ವೇಷಣೆ ಮಾಡಿ,ಜನಸಾಮಾನ್ಯರ ನೋವು ನಲಿವನ್ನೇ ಹೆಕ್ಕಿ ಬರೆದ ಹಾಗೆ, ಸಾಹಿತ್ಯ ಕ್ಷೇತ್ರದಲ್ಲೇ ಹೊಸ ಉನ್ಮಾದ ತಂದವರು.


ಅಭ್ಯಾಸದ ನಾಲ್ಕು ಕಥೆಗಳಲ್ಲಿ ಮೊದಲನೆಯ ಕಥನ ಕವನ

೧. ಸಮಾಧಿಯ ಸತ್ವ:

ಈ ಕವನ ಕಥನ ಅಮೇರಿಕದ ಹಿರಿಯ ಉಪದೇಶಿ ಇಂಗರಸಾಲ ನಿಂದ ಪ್ರೇರಿತ ಕಥೆ
ಜಪಾನಿನ ಟೋಕೊಯೋ ನಗರದ ಹತ್ತಿರ ಒಂದು ಪವಿತ್ರ ಕ್ರೈಸ್ತ ಸಮಾಧಿಯಿತ್ತು ಭಕ್ತಿಯಿಂದ ಆರಾಧಿಸುವವರಿಗೆ ಇಷ್ಟಾರ್ಥ ಸಿದ್ಧಿಯುಂಟಾಗುತ್ತದೆಂಬ ಮಾತು ಮಾತಿಗೆ ಪ್ರಸಿದ್ಧಿಯಾಗಿತ್ತು. ಸನಿಹ ಬಂದವರ ಬೇಡಿಕೆ ಈಡೇರಿಸೋ ಆ ಸಮಾಧಿಯ ನೋಡಿಕೊಳ್ಳುತ್ತಿದ್ದ ಗುರುವಿಗೆ ನೂರಾರು ಮಂದಿ ಶಿಷ್ಯಂದಿರಿದ್ದರು. ಒಂದು ಕಾಲದಲ್ಲಿ ಭಕ್ತರ ಆರಾಧನೆಯ ಕೇಂದ್ರವಾಗಿದ್ದ ಆ ವೃಂದಾವನ ಒಮ್ಮೆ ಬಂದ ಭೀಕರ ಬರಗಾಲದಲ್ಲಿ ಕಂಗೆಟ್ಟಿತು. ಭಕ್ತರು ಬರುವವರಿಲ್ಲದೇ ವರಮಾನ ಕಡಿಮೆಯಾಗಿ ದಿನ ನಿತ್ಯದ ಖರ್ಚಿಗೂ ಅಕಾಲ ಬಂದೊದಗಿತು. ಅನ್ಯದಾರಿಕಾಣದೇ ಗುರುಗಳು ತನ್ನ ಶಿಷ್ಯಂದಿರಿಗೆ ತಮ್ಮತಮ್ಮ ದಾರಿ ತಾವೇ ಅರಸಲು ಅಪ್ಪಣೆ ಕೊಡಿಸಿದರು. ಅವರ ಪೈಕಿ ಅತ್ಯಂತ ಚಿಕ್ಕ ಶಿಷ್ಯನೊಬ್ಬ ಆ ಗುರುಗಳ ಪರಮ ಆಪ್ತನಾಗಿದ್ದ. ಅವನನ್ನು ಬರಿ ಕೈಯ್ಯಲ್ಲಿ ಹೋಗ ಗೊಡದೇ ಗುರುಗಳು ತನ್ನ ಬಳಿಯಿದ್ದ ಒಂದು ತನ್ನ ಬಳಿಯಿದ್ದ ಕತ್ತೆಯ ಮರಿಯನ್ನು ಪ್ರೀತಿಯ ದ್ಯೋತಕವಾಗಿ ಶಿಷ್ಯನಿಗಿತ್ತು ಜೋಪಾನವಾಗಿ ಸಾಕಿಕೊಳ್ಳಲು ಹೇಳುವರು.
ಅಂತೆಯೇ ಶಿಷ್ಯ ಗುರುಗಳಿತ್ತ ಕತ್ತೆಯ ಮರಿಯನ್ನು ಕರಕೊಂಡು ತನ್ನ ಉದರಂಭರಣೆಗಾಗಿ ಹೊರಡುತ್ತಾನೆ. ಭೀಕರ ಬರಗಾಲ, ಶಿಷ್ಯನಿಗೇ ತಿನ್ನಲು ಗತಿಯಿಲ್ಲ, ಇನ್ನು ಕತ್ತೆಯ ಮರಿಯ ಗತಿ? ಅನತಿ ಕಾಲದಲ್ಲೇ ಅದೂ ಕಾಲವಲಶವಾಗಿ ಬಿಡುತ್ತದೆ. ಗುರುಗಳಿತ್ತ ಪ್ರೀತಿಯ ಕಾಣಿಕೆಯನ್ನೂ ಸಾಕಲಾರದೇ ಕಳೆದುಕೊಂಡ ಶಿಷ್ಯ ಬೇರೇನೂ ಮಾಡಲೂ ತೋಚದೇ ಅದನ್ನು ದಾರಿಯಲ್ಲೇ ಒಂದೆಡೇ ಹೂಳಿ ಆಸ್ಥಾನದಲ್ಲಿ ಚಪ್ಪರವೊಂದನ್ನು ಕಟ್ಟಿಕೊಂಡು ಸ್ವಲ್ಪ ಕಾಲ ಅಲ್ಲಿರಲು ನಿರ್ಧರಿಸುತ್ತಾನೆ. ಮಾರನೆಯ ದಿನವೇ ಒಬ್ಬದಾರಿ ಹೋಕ ಈ ಶಿಷ್ಯನಿರುವ ಸಮಾಧಿಗೆ ಬಂದು ಧ್ಯಾನಸ್ಥನಾದ ಶಿಷ್ಯನನ್ನು ನೋಡಿ ಕೈಮುಗಿದು ತೆರಳುತ್ತಾನೆ. ಅವನ ಇಚ್ಚೆಯಂತೆ ಆತನಿಗೆ ಹಸನಾದಾಗ, ಬಾಯಿಂದ ಬಾಯಿಗೆ ಈ ವಿಷಯ ಹರಡಿ ಈ ಸಮಾಧಿಯೂ ಶಿಷ್ಯನೂ ಅತಿ ಬೇಗನೇ ಪ್ರಸಿದ್ಧಿ ಹೊಂದುತ್ತಾರೆ.
ಮಾತಿಗೆ ಮಾತು ಹರಡಿ ಅವನ ಗುರುಗಳಿಗೂ ಗೊತ್ತಾಗಿ ಅವರೂ ಇಲ್ಲಿಗೆ ಬರುತ್ತಾರೆ. ಮಾತು ಕಥೆಗಳೆಲ್ಲಾ ನಡೆದು ವಿಷಯ ಅರುಹುವಾಗ ಶಿಷ್ಯ ಒಳಗಿಂದೊಳಗೇ ಬೇಸರಿಸುತ್ತಾ ಕತ್ತೆ ಮರಿಯ ವಿಷಯ ಅವರಿಗೆ ತಿಳಿಸುತ್ತಾನೆ.
ಆಗ ಗುರುಗಳು ನಕ್ಕು ಎಲಾ ಹೈದನೇ ಅದಕ್ಯಾಕೆ ಬೇಸರ ನಾವಿದ್ದ ಮೊದಲ ವೃಂದಾವನ ಈ ಮರಿ ಕತ್ತೆಯ ತಾಯಿಯದ್ದಾಗಿತ್ತು ಎಂದು ನಗುತ್ತಾರೆ.
ಕಥೆ ಇಲ್ಲಿಗೆ ಮುಗಿಯಿತು ಆದರೆ ಮಾಸ್ತಿಯವರ ಕಥನ ತಂತ್ರ ಇನ್ನೂ ಮುಂದುವರಿಯುತ್ತದೆ.
ಪುಟ ೮೬
'ಹೋ' ಎಂದು ಗೊಳ್ಳೆಂದು ಕೇಳುತ್ತಿದ್ದವರೆಲ್ಲ
ನಕ್ಕು ಸಾಕಾಗಿ ಹೋದರು. ಸ್ವಲ್ಪ ಹೊತ್ತಿನಲಿ
ಎಲ್ಲ ಸುಮ್ಮನಾಗಲು, ಕಥೆಗೆ ಟಿಪ್ಪಣಿಯ
ವೆಂಕಪ್ಪ ಹೇಳುದರು: 'ಕಥೆ ಚೆನ್ನವಾಗಿಹುದು
ಮತದ ಹೆಸರಲಿ ಮೋಸ ಮಾಡುವವನು ಇನ್ನೆಲ್ಲ
ಮೋಸ ಮಾಡುವ ಜನರ ತೆರನೆ ತನ್ನೊಳಗಿರುವ
ದೌರಾತ್ಮ್ಯವನು ಹೊರಗೆ ಸೂಸುವನು. ಇದರಿಂದ
ನಿಜವಾದ ಮತಕೆ ಕೊರೆಯಡಸದು. ನಿಜದ ಮತ
ನಿಜವೇ ಸರಿ. ಅದರಿಂದ ಜನ ಒಳ್ಳೆಯವರಾಗಿ
ಬಾಳುವುದೇ ನಿಜ. ಬಣ್ಣಹಚ್ಚಿ ಮಾಡಿದ ಚಿನ್ನ
ದಿಟವಾಗಿ ಚಿನ್ನವಹುದೇ?. ಅಂತೆ ವೇಷದಲಿ
ಮತವೆಂದು ಕಾಣುವ ಭಿಭೀಷಿಕೆಯ ನಿಜವಾಗಿ
ಮತವೆನ್ನಬಾರದೆಲೆ, ಅದು ಭಿಭೀಷಿಕೆಯೆಂದು
ತೋರುವುದು ನಿಜವಾದ ಮತಕೆ ಬೆಲೆ ತಂದಂತೆ,
ಹಿರಿಯ ಉಪದೇಶಿ ಅಮೇರಿಕದ ಇಂಗರಸಾಲ
ನಿಜವಾದ ಮತಕೆ ಉಪಕಾರವನೇ ಮಾಡಿಹರು.
ಅಂತೆಯೇ ಇಂದು ಡಾಕ್ಟರು ನಮಗೆ ಆಕಥೆಯ
ಹೇಳಿ ನಿಜವಾಗಿ ಉಪಕಾರವನೇ ಮಾಡಿಹರು.
ಕಥೆಯೊರೆದ ಉಪದೇಶಿ ಒಬ್ಬ ನಾಸ್ತಿಕವಾದಿ.
ಕೇವಲ ವಿಚಾರ ವಿಶ್ವಾಸಿಗಳ ಗುಂಪಿನಲಿ
ಪ್ರಮುಖ ನಾಯಕ .................
ನಂಬಿಕೆಯ ತಳಹದಿಯೇ ಬದುಕು, ಸಮಾಜ. ನಂಬಿಕೆ ಮತ್ತು ಶೃದ್ಧೆ ಬದುಕನ್ನು ಹದ ಮಾಡುತ್ತದೆ ಅನ್ನೋದು ಈ ಕಥೆಯ ಸಾರಾಂಶ.
೨. ರಾಮ ಪ್ರಿಯ ಉಧಂತ
(ನಾಳೆಗೆ ಮುಂದುವರಿಯುವುದು)