Search This Blog

Monday, September 27, 2010

ಗ್ರೀಷ್ಮದ ಮೆ(ಮು)ಲುಕಾಟ

ಗ್ರೀಷ್ಮದ ಮೆ(ಮು)ಲುಕಾಟ






ಮತ್ತೆ ಗತಿಸಿತು ಇನ್ನೊಂದು ಸಂವತ್ಸರವು
ಮತ್ತು ಸ್ವಲ್ಪ ಜಾಸ್ತಿ ಹಳಬರಾದೆವು ನಾವು
ಈ ಸಾರಿ ಬೇಸಗೆ ಸ್ವಲ್ಪ ಜಾಸ್ತಿ ಬಿಸಿಯಾಯ್ತು
 ಚಳಿಗಾಲ ಸ್ವಲ್ಪ ಜಾಸ್ತಿಯೇ ಚಳಿಯಾಯ್ತು

ಅಷ್ಟೇನೂ ಅತೀ ಹಿಂದಿನ ಅನುಭವ ಅಲ್ಲ ಇದು
ಭರ್ತಿ ಹುರುಪಿದ್ದ ಕಾಲವಿತ್ತು ಆಗ ಅದು
ಗತ ವೈಭವದ ನೆನಪು ಯಾರಾದ್ರೂ ಎಂದದ್ದೇ
ಪ್ರತಿ ಬಾರಿ ಅದರ ಮೆಲುಕಲ್ಲೇ ನಾನಿದ್ದೆ

ಆಗೆಲ್ಲಾ ನಮ್ಮ ಲಗ್ಗೆಯಿತ್ತು ಮದುವೆ ಮುಂಜಿಗಳಲ್ಲೂ
ಫುಟ್ ಬಾಲ್ ಕ್ರಿಕೆಟ್ ಮತ್ತಿತರ ಚಟುವಟಿಕೆ ಗಳಲ್ಲೂ
ಈಗ ಬರೇ ಅಂತ್ಯ ಸಂಸ್ಕಾರ, ಶೋಕಾಚರಣೆಗಳು
ಮತ್ತು ಅಗಾಗ್ಗೆ ಬೊಜ್ಜ  ತಿಥಿ ಊಟ  ಗಳು

ಆಗೆಲ್ಲಾ ಪಾರ್ಟಿ ನಗೆಕೂಟಗಳ ಸಂಭ್ರಮವಿತ್ತು
ಅದರ ಸ್ಮೃತಿಗಳ ಅಗಾಗ್ಗೆ ಮೆಲುಕಾಟವಿತ್ತು
ಈಗಂತೂ ಮೈ ಕೈ ನೋವುಗಳ ಭರ್ಜರಿಯೂಟ
ಮತ್ತು ನಿಶೆಯ ರಾತ್ರೆಗಳ ನಿದ್ರಾಭಂಗ ಕಾಟ

ಹೊರ ಏಕಾಂತವಾಸಗಳ ಸವಿಯಲ್ಲಿ
ರಾತ್ರೆಯ ಒಡನಾಟಗಳ ಸಂಭ್ರಮದ ಕುಷಿಯಲ್ಲಿ
ಸಂಜೆಯ ನಡುಗೆ ಅಜೀರ್ಣ ಕಡಿಮೆ ಮಾಡೋದಕ್ಕೆ
ಮತ್ತೆ ಗುಳಿಗೆ ರಾತ್ರೆಯ ನಿದ್ದೆ ಮಾಡಿಸೋದಕ್ಕೆ

ಆಗೆಲ್ಲಾ ನಮ್ಮ ಪ್ರೋತ್ಸಾಹದ ಪ್ರವಾಸವಿತ್ತು
ಹತ್ತಿರ ದೂರದ ಪ್ರೇಕ್ಷಣೀಯ ಸ್ಥಳಗಳತ್ತ
ಈಗಂತೂ ಪ್ರತಿ ಯಾನ ವೂ ತುಂಬುತ್ತಿದೆ
ನಮ್ಮ ದೇಹವ ನೋವಿನ ಮಹಾ ಪೂರದೆ

ರಾತ್ರೆ ಕ್ಲಬ್ಬಿನ ನಮ್ಮ ಅವಿರತ  ಭೇಟಿಯ
ಸ್ವಲ್ಪ ಜಾಸ್ತಿಯೇ ಮೈ ಮರೆವ ಆ ಪೇಯ
ಈಗಿನ ರಾತ್ರೆಯ  ಮನೆವಾಸ ಲೇಸು
ಕೇಳುತ ಕಳೆಯಲು ಸಂಜೆಯ ನ್ಯೂಸು

ಹೀಗಿದೆ ಜೀವನ  ನಮ್ಮದು ಗೆಳೆಯ
ಹಳತಾಗಿದೆ ಈ ಗೋಳಿನ ಕಥೆಯ
ಈಗಿನ ಪ್ರತಿದಿನ ಕಳೆ ನೀ  ನಗುತಲು
ಮುಲುಕುವ ನನ್ನಂತಾಗುವ ಮೊದಲು

Sunday, September 26, 2010

ಶ್ರೀಯುತ ಡಿ ಎಸ್ ರಾಮಸ್ವಾಮಿಯವರಿಗೆ ೨೦೧೦ ರ " ವಿಭಾ ಸಾಹಿತ್ಯ ಪ್ರಶಸ್ತಿ"

ಶ್ರೀಯುತ ಡಿ ಎಸ್ ರಾಮಸ್ವಾಮಿಯವರಿಗೆ ೨೦೧೦ ರ " ವಿಭಾ ಸಾಹಿತ್ಯ ಪ್ರಶಸ್ತಿ"




ಮಿತ್ರರೇ

ಒಂದು ಅತ್ಯಂತ ಶುಭ ಹಾಗೂ ಖುಶಿ ಸಮಾಚಾರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನ್ನ  ಮನಸ್ಸು ತವಕಿಸುತ್ತಿದೆ.

ಸಂಪದಿಗರಾದ  ಡಿ ಎಸ್ ರಾಮಸ್ವಾಮಿಯವರಿಗೆ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ನೀಡಲಾಗುವ ೨೦೧೦ ರ "ವಿಭಾ ಸಾಹಿತ್ಯ ಪ್ರಶಸ್ತಿ" ಅವರ "ತೆರೆದರಷ್ಟೇ ಬಾಗಿಲು" ಕೃತಿಗೆ ಲಭಿಸಿದೆ.

ಇವರ "ಮರೆತ ಮಾತು’(೨೦೦೨);’ಉಳಿದ ಪ್ರತಿಮೆಗಳು’(೨೦೦೭) ಎರಡು ಕವನ ಸಂಕಲನಗಳು ಪ್ರಕಟಗೊಂಡಿವೆ.

ಶಿವಮೊಗ್ಗ ಕರ್ನಾಟಕ ಸಂಘದ ಪ್ರೊ.ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ ಮತ್ತು ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಯ ಪ್ರಶಸ್ತಿಗಳು ಲಭಿಸಿವೆ.

ಪ್ರಜಾವಾಣಿ ದೀಪಾವಳಿ ಕವನಸ್ಪರ್ಧೆ ೨೦೦೪,೨೦೦೫ ಮತ್ತು ೨೦೦೮ರ ಬಹುಮಾನ. ಆಕಾಶವಾಣಿ ಹಾಸನಕೇಂದ್ರದಿಂದ ಇವರ  ೧೦೦ಕ್ಕೂ ಹೆಚ್ಚು ಚಿಂತನ ಬರಹಗಳು ಪ್ರಸಾರಗೊಂಡಿವೆ.

ಭಾರತೀಯ ಜೀವ ವಿಮಾನಿಗಮದ ಅರಸೀಕೆರೆ ಶಾಖೆಯಲ್ಲಿ ಉದ್ಯೋಗದಲ್ಲಿರುವ ಶ್ರೀಯುತ ರಾಮಸ್ವಾಮಿಯವರು ಇತ್ತೀಚೆಗಷ್ಟೇ ಬೆಂಗಳೂರಿಗೆ ವರ್ಗವಾಗಿ ಅಧಿಕಾರ ಸ್ವೀಕರಿಸಿದ್ದಾರೆ .


ನಮ್ಮ ನಿಮ್ಮೆಲ್ಲರ ಮೆಚ್ಚುಗೆಗೆ ಪ್ರಶಂಶೆಗೆ ಪಾತ್ರರಾಗಿರುವ  ಇವರ ಲೇಖನಿಯಿಂದ ಇನ್ನೂ ಇಂತಹ ಹಲವಾರು ಕೃತಿಗಳು ಉದ್ಭವಿಸಲಿ ಮತ್ತು ಇನ್ನೂ ಇಂತಹ ಹತ್ತು ಹಲವಾರು  ಪ್ರಶಸ್ತಿಗಳು ಇವರಿಗೆ ಲಭಿಸಲಿ

ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ.

Friday, September 24, 2010

ಬಸ್ಸಿನಲ್ಲಿ ತನ್ನದಲ್ಲದ್ದು


ತ್ಯಾಂಪ
ಕೈ ಹಾಕಿದ ಜೇಬಿಗೆ
ಪಾಕೀಟು,
ಅಧರ ವರ್ಣ  ದಂಡ
ಕತ್ತರಿ,
ಉಗುರ  ವರ್ಣ ಲೇಪ
ಬಾಚಣಿಗೆ
ಚಿಲ್ಲರೆ
ಬಿಸ್ಕತ್ತು
ಇನ್ನೂ ಏನೇನೋ
ಒಂದೊಂದಾಗಿ
ಸಿಗುತ್ತಿರಲು
 ಇದೇನಿದು
ನನ್ನ ಕಿಸೆಯಲ್ಲಿ
ಅಂದುಕೊಳ್ಳುತ್ತಿರುವಾಗಲೇ
ಚಟೀರ್ ಅಂತ ಪೆಟ್ಟು ಕೂಡಾ
ಆಗಲೇ ಗೊತ್ತಾದದ್ದು
ಇದು ತನ್ನದಲ್ಲ
ಅಂತ

ಮಹಾ ತಿಮಿರ

ಮಹಾ ತಿಮಿರ

ಹೊರಗೆ ಕವಿಯುತ್ತಿದೆ
ಸಂಜೆಯ ಕತ್ತಲು
ಜತೆಗೆ ಸುರಿಯುವ
ಸೋನೆ ಮಳೆ
ಮನದ ಬಾನಲೂ
ಆತಂಕದ ಛಾಯೆ
ನಾಳಿನ ಚಿಂತೆಯ
ಮಹಾ ತಿಮಿರ
ಮಾಯೆಯ ಮುಸುಕು
ಅಂದರೂ
ಪ್ರಕೃತಿಯ ಕೋಪ ಎಂದರೂ
ಕವಿಯುವುದು
ನನ್ನ ಮೇಲೇಯೇ ಎಲ್ಲ
ಮನೆಯೊಳಕ್ಕೆ
ಧಾವಿಸಲೂ ಮನಸ್ಸಿಲ್ಲ
ಅಲ್ಲೂ ಕತ್ತಲೆಯೇ
ಯಾಕೆಂದರೆ
ಕರೆಂಟಿಲ್ಲ

ಒಬ್ಬ ವ್ಯಾಪಾರಿ ದಿವಾಳಿಯಾಗುವ ಸ್ಥಿತಿ ತಲುಪಿದ್ದ.
ಸಾಲಗಾರರ ಕಾಟ ಆತ ತಡೆಯಲಾರದೇ ಹೋದ. ಇವೇ ತನ್ನ ಬದುಕಿನ ಕೊನೆಯ ದಿನಗಳಂತೆ ಅನ್ನಿಸಿತು ಅವನಿಗೆ. ಬೇರೆ ದಾರಿಯೇ ಕಾಣದೇ ಒಂದು ಪಾರ್ಕ ನ ಬೆಂಚಿನ ಮೇ ಲೆ ತನ್ನ ಎರಡೂ ಕೈಗಳನ್ನು ತಲೆಯ ಮೇಲಿಟ್ಟು ಕುಳಿತಿದ್ದ,  ಸಹಾಯದ ಏನಾದರೂ ಹೊಸ ಕಿರಣ ಸಿಗಬಹುದೇ ಎಂದು ಯೋಚಿಸುತ್ತಾ....
ಅಕಾಸ್ಮಾತ್ತಾಗಿ ಒಬ್ಬ ವೃದ್ಧ ಆತನೆದುರಿಗೆ ಬಂದು ಕೇಳಿದ " ಏನು ... ತುಂಬಾ ಚಿಂತೆಯಲ್ಲಿರೋ ಹಾಗಿದೆ?"
ಈತ ತನ್ನ ಕಷ್ಟಗಳನ್ನೆಲ್ಲಾ ಅವನಿಗೆ ತಿಳಿಸಿದ.
ತುಂಬಾ ಸಮಾಧಾನದಿಂದ ಕೇಳಿದ ವೃದ್ಧ " ನಾನು ನಿನಗೆ ಸಹಾಯ ಮಾಡ ಬಲ್ಲೆ ಎನ್ನಿಸುತ್ತಿದೆ" ಎಂದ
ಈತನ ಹೆಸರು ಕೇಳಿದ ವೃದ್ಧ ಒಂದು ಚೆಕ್ ಬರೆದು ಆತನ ಕೈಗಿತ್ತು ಹೇಳಿದ " ಇಗೋ ಇದನ್ನು ತೆಗೆದುಕೋ, ಇವತ್ತಿಂದ ಸರಿಯಾಗಿ ಒಂದು ವರುಷದ ಬಳಿಕ ನಾವು ಇದೇ ಜಾಗದಲ್ಲಿ ಸಿಗೋಣ, ಆಗ ನೀನು ಈ ಹಣ ನನಗೆ ವಾಪಾಸ್ಸು ಕೊಟ್ಟರೆ ಸಾಕು" ಎಂದ.
ಆತ ಹೇಗೆ ಬಂದಿದ್ದನೋ ಹಾಗೇ ವಾಪಾಸ್ಸು ಹೋದ.
ಈತ ತನ್ನ ಕೈಯ್ಯಲ್ಲಿದ್ದ ಚೆಕ್ ನೋಡಿದ, ಅದು ೫,೦೦,೦೦ ಡಾಲರ್ ಚೆಕ್, ರುಜು ಹಾಕಿದಾತ ಆಗಿನ ಅತ್ಯಂತ ದೊಡ್ಡ ಶ್ರೀಮಂತರ ಸಾಲಿನ ಜೋನ್ ಡಿ ರಾಕ್ ಫೆಲ್ಲರ್.
"ನನ್ನ ಜೀವನದ ಅತ್ಯಂತ ಯಾತನಾಮಯ ದಿನಗಳು ತೊಲಗಿದವು" ಈತನೆಂದುಕೊಂಡ,
ಆದರೆ ಆತನು ಆತ ಈ  ಚೆಕ್ಕನ್ನು ತನ್ನ ತಿಜೋರಿಯಲ್ಲಿಯೇ ಇಟ್ಟುಕೊಂಡು, ಅದು ತನ್ನ ಬಳಿಯಿದೆ ಎನ್ನುವ ಯೋಚನೆಯೇ ತನಗೆ ತನ್ನ ಬುಸಿನೆಸ್ ನಲ್ಲಿ ಈ ದುರ್ವಿಧಿಯಿಂದ ಪಾರಾಗಲು ಏನಾದರೊಂದು ಹೊಸ ಯೋಚನೆ ಹೊಳೆಸೀತು ಎಂದುಕೊಂಡ.
ಅದು ಹಾಗೆಯೇ ಆಯ್ತು, ಆತನ ಈ ಹೊಸ ಆಲೋಚನೆಯೇ ಆತನ ವ್ಯಾಪಾರೀ ಮನೋಭಾವನೆಯನ್ನು  ಎದ್ದೇಳಿಸಿ ಹೊಸ ಶಕ್ತಿ ತುಂಬಿತು ಮತ್ತು ಕೆಲವೇ ತಿಂಗಳಲ್ಲಿ ಆತ ತನ್ನ ಹಳೆಯ ಸಾಲದಿಂದ ಮುಕ್ತನಾಗಿದ್ದ, ಮತ್ತು ಆತನ ಲಾಭ ದ್ವಿಗುಣವಾಗತೊಡಗಿತು.
ಸರಿಯಾಗಿ ಒಂದು ವರುಷದ ಬಳಿಕ ಆತ ಅದೇ ಪಾರ್ಕನಲ್ಲಿ ಹಳೆಯ ಚೆಕ್ ಹಿಡಿದುಕೊಂದು ಆ ವೃದ್ಧನಿಗಾಗಿ ಕಾಯುತ್ತಿದ್ದ. ಹೇಳಿದ ಸಮಯಕ್ಕೆ ಸರಿಯಾಗಿ ಆ ವೃದ್ಧ ಹಾಜರಾಗಿದ್ದ.
ಆದರೆ ಇನ್ನೇನು ವ್ಯಾಪಾರಿ ತನ್ನ ಏಳಿಗೆಯ ಕಥೆ ಅವನಿಗೆ ಹೇಳಿ ಧನ್ಯವಾಅದಾ ಸಮರ್ಪಿಸಿ ಅವನ  ಚೆಕ್ ವಾಪಾಸು ಕೊಡಬೇಕೆಂದು ಕೊಂಡಿದ್ದ.
ಅಷ್ಟರಲ್ಲಿ ಒಬ್ಬ ದಾದಿ ಓಡುತ್ತ  ಬಂದು ಆ ವೃದ್ಧನನ್ನು ಹಿಡಿದುಕೊಂಡಳು.
"ಅಂತೂ ನಾನು ಅವನನ್ನು ಹಿಡಿದು ಬಿಟ್ಟೆ, ಆತನು ನಿಮಗೇನೂತೊಂದರೆ ಕೊಡಲಿಲ್ಲ  ತಾನೇ, ಆತ ವೃದ್ಧಾಶ್ರಮದಿಂದ ತಪ್ಪಿಸಿಕೊಂಡು ಬಂದು ತಾನು ಶ್ರೀಮಂತ ಜೋನ್ ಡಿ ರಾಕ್ ಫೆಲ್ಲರ್ ಎಂದೇ ಹೇಳುತ್ತಾನೆ" ಹೇಳಿ ಆಕೆ ಆತನನ್ನು ತನ್ನ  ಜತೆ ಕರೆದೊಯ್ದಳು.
ವ್ಯಾಪಾರಿ ಸ್ಥಂಭೀಭೂತನಾದ.
ಹಾಗಾದರೆ ಇಡೀ ಒಂದು ವರ್ಷ ತನ್ನ ವ್ಯಾಪಾರವನ್ನು ಉತ್ತುಂಗಕ್ಕೇರಿಸಿದ್ದು ತನ್ನ ಹತ್ತಿರವಿದ್ದ  ಈ ೫ ಲಕ್ಷದ ಚೆಕ್ಕೇ ಅಲ್ಲವೇ.
ಆಗಲೇ ಆತನಿಗೆ ಅರಿವಾದದ್ದು ತನ್ನ ವ್ಯಾಪಾರದ ಏಳಿಗೆಗೆ ಕಾರಣ ತನ್ನ ಹತ್ತಿರವಿದ್ದ ಹಣವಲ್ಲ,
ಬದಲು ಆತನನ್ನು ಹೊಸದಾಗಿ ಹೊಸ ರೀತಿ ಯೋಚಿಸಲು ಪ್ರೇರೇಪಿಸಿದ್ದ ಮಾನಸಿಕ ಶಕ್ತಿ  ಆತನ ನಂಬುಗೆ.

(ನೆಟ್ ಕಥೆ  ಆಧಾರಿತ)

ಬರೇ ನನ್ನೊಬ್ಬನಿಂದೇನಾಗುವುದು!!!!!!

ಬರೇ ನನ್ನೊಬ್ಬನಿಂದೇನಾಗುವುದು!!!!!!



ಮರಳಿನ ಕಣ ಕಣ ಹೀಗೆಂದಿದ್ದರೆ
ಪ್ರಥ್ವಿಗೆ ನೆಲವು ಎಲ್ಲಿರುತ್ತಿತ್ತು?
ನೀರಿನ ಪ್ರತಿ ಅಣು ಹೀಗೆಂದಿದ್ದರೆ
ಇಹದಾ ಸಾಗರಕರ್ಥವು ಇತ್ತೆ?


ಸ್ವರವೊಂದೊಂದೂ ಹೀಗೆಂದಿದ್ದರೆ
ಸಂಗೀತವಂತೂ ಎಲ್ಲಿರುತ್ತಿತ್ತು?
ಅಕ್ಷರವೊಂದು ಹೀಗೆಂದಿದ್ದರೆ
ಓದಲು ನಮಗೆ ಏನಿರುತ್ತಿತ್ತು?



ಪೈರು ಪಚ್ಛೆಗಳೆಲ್ಲಿಯ ಬಯಲು,
ಧಾನ್ಯದ ಕಾಳೂ ಹೀಗೆಂದಿದ್ದರೆ
ಮನೆಯೇ ಇರುವುದು ಸಂಶಯವಿತ್ತು
ಇಟ್ಟಿಗೆಯಂತೂ ಹೀಗೆಂದಿದ್ದರೆ


ನಮ್ಮಲ್ಲೆಲ್ಲರೂ ಹೀಗೆಂದಿದ್ದರೆ
ಶಾಂತಿ ಪ್ರೀತಿಯ ಹೆಸರಿರುತ್ತಿತ್ತೇ?
ಈ ವ್ಯತ್ಯಯವರಿತರೆ ನಾವೂ
ನಡುವಿನ ಅಂತರ ನೀಗದೇ ಮತ್ತೇ

ತ್ಯಾಂಪನ ರಾಮಾಯಣ



ಕಾರು ತುಂಬಾ ಹಸಿರಾದ ವಾತಾವರಣದಲ್ಲಿ ಹೊಕ್ಕ ಹಾಗಿತ್ತು, ವಿಶಾಲವಾದ ಜಾಗ ಆವರಣದಲ್ಲಿ ಕಾರು ನಿಂತಿತು. ಕಾರಿನಿಂದ ಕೆಳಗಿಳಿಯುತ್ತಲೇ ದೂರದಲ್ಲಿ ದೊಡ್ಡದಾಗಿ ಬರೆದ " ನಿಮಾನ್ಸ್ ಮಾನಸ ಚಿಕಿತ್ಸಾಲಯ" ಕಂಡಿತು.
ಪಕ್ಕ ತಿರುಗಿದೆ ದೊಡ್ಡ ದೊಡ್ಡ ಸರಳುಗಳ ಮುಚ್ಚಿದ ಬಾಗಿಲಿನ ಹಿಂದೆ ಒಬ್ಬನನ್ನು ಹಿಡಿದು ಎಳೆಯುತ್ತಿದ್ದರು ಇಬ್ಬರು, "ನಾನು ಹುಚ್ಚ ಅಲ್ಲ ನಾನು ಹುಚ್ಚ ಅಲ್ಲ " ಎನ್ನುವ ಮಾತು ಆರೋಗಿಯ ಬಾಯಿಂದ.
ಯಾಕೋ ಸ್ವರ ಕೇಳಿದ ಹಾಗೆಯೇ ಇತ್ತು. ಸ್ವಲ್ಪ ಈ ಕಡೆ ತಿರುಗಿದ ಮುಖ ನೋಡಿ ಬೆಚ್ಚಿದೆ!!! ತ್ಯಾಂಪ....ಅವನಿಗೇನಾಯ್ತು... ? ಆತನೂ ಈ ಕಡೆ ತಿರುಗಿ... ಸೀನಾ ನಾನು ಹುಚ್ಚ ಅಲ್ಲ ಕಣೋ ಇವರು ಸುಮ್ಮನೇ ಕರೆತಂದಿದ್ದಾರೆ ನನ್ನ ಬಾರೋ ಇಲ್ಲಿಂದ ಬಿಡಿಸೋ ಅನ್ನುತ್ತಿದ್ದ.....
ಥಟ್ಟನೆ ಎಚ್ಚರಾಯ್ತು..
ಹೌದು ಇದು ಕನಸೇ...
ಪಕ್ಕದಲ್ಲೇ ದೂರವಾಣಿಯ ಸದ್ದು.. ಅದೇ ಸ್ವರ ಸೀನನದ್ದು
ತ್ಯಾಂಪನ್ನ ಕಂಡಿದ್ಯಾ..?
ಇಲ್ಲೆ ಯಾಕೆ...?
ಹುಶಾರಿಲ್ಲೆ ಅಂಬ್ರ...
ಎಂತ ಆಯ್ತಾ..?
ನೀ ಹೋಯ್ ಕಾಣ ಅಕ್ಕಾ... ನಾನ್ ಕಡಿಗ್ ಬತ್ತೆ.
ಏನು ಮಾಡಲೂ ಗೊತ್ತಾಗದೇ ಅವನ ಮನೆಗೆ ಫೋನಾಯ್ಸಿದೆ. ಯಾರೋ ಎತ್ತಿದರು. ಯಾರು ಮಾತಾಡೋದು?...ತ್ಯಾಂಪ....
ತ್ಯಾಂಪಾ... ಏನಾಯ್ತೋ ಹುಷಾರಿಲ್ಲ ಅಂಬ್ರಲ್ಲ ಏನಾಯ್ತು..?
ಯಾರು ತ್ಯಾಂಪ..? ಇಲ್ಲಿಯಾರೂ ತ್ಯಾಂಪ ಇಲ್ಲಲ್ಲ..
ಮತ್ತೆ ನೀವು ಯಾರು..? ನಾನು ಮಂಗ್ಯಾ...

ನಂಬರ್ ಪುನಹ ತಾಳೆ ನೋಡಿದೆ ಅದೇ ಇದೆ ಮತ್ತೆ ಸ್ವರ ಅವನದ್ದೇ ಆದರೆ ಯಾಕೆ ಮಂಗ್ಯಾ ಅಂದ...
ಅಂದರೆ ಕೇಸು ಸೀರಿಯಸ್ಸೇ... ಅಲ್ಲಿಗೇ ಹೋಗ ಬೇಕಾಗಿದೆ

ಅವನ ಚಿಕ್ಕಂದಿನ ಕಥೆಯಿದು. ಅವನಿಗೊಂದು ಅಭ್ಯಾಸ ಇತ್ತು. ಬೆಳಿಗ್ಗೆ ಎದ್ದ ಕೂಡಲೇ ಮೊದಲು ಆತ ಯಾರನ್ನ ನೋಡುತ್ತಾನೋ , ಯಾರೇ ಸಿಗಲಿ, ಅವರ ಹತ್ತಿರ ಇವ ನಾನು ಯಾರು? ಅಂತ ಕೇಳುವ. ಉತ್ತರಕ್ಕೆ ಅವರು ಏನೇ ಹೇಳಲಿ ಆ ದಿನವಿಡೀ ಮನೆಯಲ್ಲಿ ಎಲ್ಲರೂ ಅದೇ ಹೆಸರು ಹಿಡಿದೇ ಕರೆಯ ಬೇಕು. ಬೇರೆ ಯಾವ ಹೆಸರೂ ಕರೆಯ ಕೂಡದು. ಯಾರೋ ಬೆಳಿಗ್ಗೆಮಕ್ಕಳು ತಮಾಷೆಗೆ "ನಿನ್ನ ಹೆಸರು ನಾಯಿ" ಅಂದಿದ್ದರು. ಎಲ್ಲರೂ ಅವನನ್ನು ಆ ದಿನವಿಡೀ ನಾಯಿ ಅಂತಲೇ ಕರೆಯ ಬೇಕಲ್ಲ. ಅವನಿಗೇನೂ ಬೇಸರವಿಲ್ಲ, ಬೇಸರವೆಂದರೆಹಾಗೆ ಕರೆಯದಿದ್ದರೆ ಮಾತ್ರ. ಕೆಲವೊಮ್ಮೆ ಇದು ವಿಪರಿತಕ್ಕೆ ಹೋಗಿ ಬೆಳಿಗ್ಗೆ ಅವನಿಗೆ ಏನಂತ ಹೆಸರು ಹೇಳಿದ್ದರೋ ಅದು ಮರೆತು ಹೋಗಿ, ಆ ಹೆಸರು ಕರೆಯದಿದ್ದುದ್ದಕ್ಕಾಗಿ ಇಡೀ ದಿನ ಆತ ಅಳುತ್ತಿದ್ದೂ ಉಂಟು.

ಮನೆಯಲ್ಲಿ ಆತನೇ ಇದಿರ್ಗೊಂಡ . ಏನಾಯ್ತಪ್ಪಾ ತ್ಯಾಂಪ ಎಂದರೆ ತ್ಯಾಂಪ ಯಾರು? ನಾನು ಮಂಗ್ಯಾ ಅಂದ
ಸರಿ ಬಿಡು ಮಂಗ್ಯಾ..ನಿನ್ನ ಪತ್ನಿ ಎಲ್ಲಿ" ಕೇಳಿದೆ
ಅಷ್ಟರಲ್ಲಿ ಅವನ ಹೆಂಡತಿ..
"ಇಲ್ಲಣ್ಣಾ ಅವರು ಬೇರೆಯೇ ಆಗಿದ್ದಾರೆ, ಈಗ ಯಾವಾಗಲೂ ಮಂಕಾಗಿ ಕುಳ್ತಿರ್ತಾರೆ, ಏನಾಯ್ತು ಅಂತ ಕೇಳಿದರೆ ಹೇಳೋಲ್ಲ"
"ಒಂದುಉಪಾಯ ಮಾಡು ಮಾವಿನಕಾಯಿ ತಂಬುಳಿ ಮತ್ತಿ ಹುರುಳಿ ಚಟ್ನಿ ಬೆಳ್ಳುಲ್ಲಿ ಹಾಕಿ ಊಟ ಮಾಡಿಸು, ಸರಿ ಹೋಗ್ತಾನೆ ಬಿಡು."
"ಪ್ರಯೋಜನ ಇಲ್ಲೆ, ಮೊನ್ನೆ ಏನಾಯ್ತು ಗೊತ್ತಾ? ಇವರು ಹೊರಗಡೆ ಹೋಗಿದ್ದರು!!!"
"ಯಾಕೆ ಮನೆಯಲ್ಲಿ ಪಾಯಿಖಾನೆ ಇತ್ತಲ್ಲಾ..?"
"ಅಲ್ಲಣ್ಣಾ...... ಹಾಗೇ ಅಡ್ಡಾಡಲು ಹೋಗಿದ್ದರು. ಮನೆಗೆ ಬರುವಾಗ ಮರೆತು ಹೋಗಿ ದಾರಿ ತಪ್ಪಿ ತು ಪಕ್ಕದ ಮನೆಯವರಿಗೆ ಅಂತ ಕೊಟ್ಟ ಕಾಗದ ಅವರ ಕೈಯಲ್ಲೇ ಇತ್ತು, ಅದರಲ್ಲಿದ್ದ ವಿಳಾಸ ಯಾರ್ಯಾರ ಹತ್ರಾನೋ ಕೇಳ್ಕಂಡು ಬಂದು ಪಕ್ಕದ ಮನೇನೇ ತಮ್ ಮನೆ ಅಂತ ತಿಳ್ಕೋಂಡು ಮಧ್ಯಾಹ್ನದ ವರೆಗೆ ಅಲ್ಲಿಯೇ ಆರಾಮ್ ಆಗಿ ಇದ್ದರು,ಸಂಜೆ ಮನೆ ಹೆಂಗ್ಸಿಗೇ ಏನಮ್ಮ ಬೆಳಗಿಂದ ಇಲ್ಲೇ ಇದ್ದೀಯಲ್ಲ ನಿಮ್ ಗಂಡ ನೋಡಿದ್ರೆ ಏನ್ ಅಂದ್ಕೊಳ್ಳೊಲ್ಲ ಅಂತ ಕೇಳೋದೇ..ಅಷ್ಟೇ ಆದ್ರೆ ಚಿಂತೆ ಇಲ್ಲಾ"
"ಹೇಳಿ ಹೇಳಿ"
"ಮೊನ್ನೆ ನಮ್ಮ ಮಗನ್ನ ಪಕ್ಕದಮನೆ ಹುಡುಗ ಅಂತ ಮಾತಾಡ್ಸಿದ್ರು, ಕೆಲವು ಸಾರಿ ನನ್ನನ್ನೇ ಯಾರು ಅಂತ ಕೇಳೋರು. . ಕಳೆದ ಹದಿನೈದ್ ದಿನದಿಂದ ಕಲ್ಲೂರಾಮ್ ರವರ ಆಫೀಸಿಗೆ ಇವ್ರ ಹೋಗಿಯೇ ಇಲ್ಲವಂತೆ , ಮನೆಯಿಂದ ದಿನಾ ಬೆಳಿಗ್ಗೆ ಹೊರಟು ಸಂಜೆ ಬರ್ತಾ ಇದ್ರು , ಎಲ್ಲಿಗೆಲ್ಲ ಹೋಗಿ ಎನೇನ್ ಮಾಡಿ ಬಂದ್ರೋ ಗೊತ್ತಿಲ್ಲ. ಈಗ ತಲೆಗೊಬ್ರ ಮಾತಾಡೋರು"
"ಯಾಕೆ ಡಾಕ್ಟ್ರ ಹತ್ರ ಹೋಗ್ಲಿಲ್ಲವಾ?"
"ಅದೇ ದೊಡ್ಡ ಕಥಿ, ನನ್ನ ಅಕ್ಕ ಡಾಕ್ಟ್ರ ಬೇಡ, ಗುರುಗಳಹತ್ರ ಹೋಗೋಣ ಅಂತ ಹೇಳಿ ಯಾವ್ದೋ ಗುರುಗಳ ಹೋಗಿ ಅವ್ರ ಹೇಳಿದ್ದ ಕೇಳ್ಕಂಡ್ ಬಂದ್ವಿ"
"ಸರಿ ಆಮೇಲೆ..?"
"ಆಮೇಲೆಂತ...? ನವಗೃಹರಿಗೆ ೯ ಸುತ್ತು, ಅಶ್ವತ್ಥನಿಗೆ ೭ ಸುತ್ತು ಅಂತ ಅಲ್ಲೆಲ್ಲ ಹೋಗಿ ತಿರುಗಿ ತಿರುಗಿ ಯಾರ್ಯಾರಿಗೋ ಡ್ಯಾಷ್ ಹೊಡ್ದ ಚಪ್ಪಲಿ ಸೇವೆ ಮಾಡ್ಕಂಡ್ ಬಂದದ್ದಾಯ್ತ್.
"ಅಯ್ಯೋ ಪಾಪ"
"ಅನುಭವಿಸ್ದೋರಿಗೇ ಗೊತ್ತು ಸಂಕಟ ,ಮೊನ್ನೆ ಇದೆಲ್ಲ ಬ್ಯಾಡ ಅಂತೇಳಿ ಯಾವ್ದೋ ಗಲ್ಲಿ ಡಾಕ್ಟ್ರ ಹತ್ರ ಹೋಯ್ತ್ ,ಅವ್ರ್ ೧೦-೧೫ ಬೇರೆ ಬೇರೆ ಮಾತ್ರೆ ಕೊಟ್ಟಿದ್ರ. ಮೊನ್ನೆ ನಾನಿಲ್ಲೆ ಅಂತೇಳಿ ಯ್ವ್ಯಾವ್ದೋ ಮಾತ್ರೆ ಎಲ್ಲ ಒಟ್ಟಿಗೇ ತಿಂದರು. ಅದ್ಕೇ ಈಗ ಬೆಳಿಗ್ಗೆ ಎದ್ದ ಕೂಡ್ಲೇ ನಾನ್ ಯಾರ?ನನ್ನ ಹೆಸರು ಎಂತ..? ಅಂತ ಕೇಳೋದು, ಎಂತ ಹೆಸರ್ ಕೇಳ್ತ್ರೋ ,ಅದೇ ಹೆಸ್ರ ದಿನಾ ಇಡೀ ಕರೆಯ ಬೇಕು
ಪಕ್ಕದ್ಮನೆ ಖಿಲಾಡಿ ಮಕ್ಕಳು ಎಂತೆಂತದ್ದೋ ಹೆಸ್ರ್ ಹೇಳಿ ಅದನ್ನ ಕರೆಯಕಾಗ್ದೇ ನಮ್ಗೆ ಪಜೀತಿ. ನನ್ನ ಖರ್ಮ

ಮೊನ್ನೆ ಆ ಗುರುಗಳು ಬಂದ್, ಡಾಕ್ಟ್ರ ಕೊಟ್ಟ ಆ ಮಾತ್ರೆ ತಿನ್ನಿಸ ಬೇಡಿ ಅಂದ್ರ ಅವನು ಹಾಗೇ ಸರಿಯಾಗ್ತಾನೆ ಅಂದ್ರು

ಇಲ್ಲ ನೀವೇ ಹೇಳಿ ಅಣ್ಣಾ..? ನಾನು ಯಾರ ಮಾತು ಕೇಳೋದು?

ನಿನ್ನೆ ನನ್ನ ಅಪ್ಪ ಇವರನ್ನು ನಿಮ್ಹಾನ್ಸ್ ಗೆ ತೋರಿಸಿ ಅಂದರು


ನಿಮ್ಹಾನ್ಸ್ ಗಾ" ಎಂದೆ ಗಾಬರಿಯಿಂದ.


-2-

ಹೌದು..ನಿಮ್ಹಾನ್ಸ್ ಗೆ"
ಯಾಕೆಂದರೆ ಅಲ್ಲಿನ ನರತಜ್ಞರು ಇವನನ್ನು ಸರಿಯಾಗಿ ಪರೀಕ್ಷಿಸಿ ಚಿಕಿತ್ಸೆ ಕೊಡಿಸುತ್ತಾರೆ ಅಂತ ಇರಬಹುದು.
ಅದೆಲ್ಲ ಸರಿ ನಿಜವಾಗಿ ಇದು ಹೇಗೆ ಶುರುವಾಯ್ತು..? ಯಾಕೆ ತ್ಯಾಂಪ ಹೀಗಾದ ಹೇಳಿ ನನಗೆ... ಮೊದಲಿಂದ." ನಾನೆಂದೆ.
ತ್ಯಾಂಪನ ಹೆಂಡತಿ ಅರ್ಥಾತ್ ತ್ಯಾಂಪಿ ಇದಕ್ಕೆ ಕಾರಣವಾದಘಟನೆಯನ್ನು ವಿವರಿಸಿದ್ದು ಹೀಗೆ
." ಆ ದಿನ ಅಂದರೆ ರವಿವಾರ ೧.೦೮.೧೦ ರಂದು. . ನಮಗೆ ಮಂತ್ರಿ ಮಾಲ್ ನಲ್ಲಿ ಸ್ವಲ್ಪ ಕೆಲಸವಿತ್ತು.ನಾನೂ ಅವರೂ ಹೊರಗಡೆ ಹೋಗಿದ್ದವು
ಹಿಂದಿನ ದಿನ ಸಂಪದದಲ್ಲಿ ಬಂದ ದುಬೈ ಮಂಜಣ್ಣನ " ನೆನಪಿನಾಳದಿಂದ...೧೧, ೧೨ " ಲೇಖನ ( http://sampada.net/blog/manju787/31/07/2010/27204), ಓದಿ ಭಾರೀ ಖುಷಿಯಲ್ಲಿದ್ದರು, ತಾವೇ ಮಂಜಣ್ಣನಾದ ಹಾಗೆ ಅವರ ಫೈಟಿಂಗ್ ಶೈಲಿ ನನಗೆ ಮತ್ತೆ ಮತ್ತೆ ವಿವರಿಸುತ್ತಿದ್ದರು. ಅದು ಅವರು ತನ್ನ ಅಕ್ಕನ ಮರಣದ ದುಃಖಾತಿರೇಕದಿಂದ ಆಗಿದ್ದೆಂದರೂ ಅವರು ಕೇಳಲಿಲ್ಲ. ಅಂತ ಅಲ್ಲಿಗೆ ಹೋದೆವು. ಅಲ್ಲಿ ಮೊದಲಿಂದ್ಲೂ ಅವರಿಗೆ ಆ "ಎತ್ತಣೆ " ನೋಡಿದರೆ ಹೆದರಿಕೆ. ಅದರಲ್ಲಿ ಎಂದೂ ಹೋಗೋದೇ ಇಲ್ಲ. ಆ ದಿನ ಪಕ್ಕದ ಮನೆಯ ಮಕ್ಕಳೂ ಜತೆಗಿದ್ದವು.ಅದರಲ್ಲೇ ಹೋಗೋಣ ಅಂತ ಅವುಗಳ ಒತ್ತಾಯ ಬೇರೆ.ಸರಿ
ಒಂದು ಕೈಯ್ಯಲ್ಲಿ ಬಕೇಟು ಹಿಡಿದು ಇನ್ನೇನು ಬೇಕೋ ಬೇಡವೋ ಅಂತ ಇನ್ನೇನು ಮೊದಲ ಹೆಜ್ಜೆ ಮೆಟ್ಟಲಿನ ಮೇಲೆ ಇಡಬೇಕು, ಪಕ್ಕದಲ್ಲೇ ಒಂದು ಹೆಂಗಸಿಗೂ ಗಂಡಸಿಗೂ ಜಗಳ( ಪ್ರಾಯಷಃ ಅವಳ ಗಂಡನೇ ಇರಬೇಕು) ಆಗುವುದನ್ನು ನೋಡಿದರು, ಇದನ್ನು ಬಿಟ್ಟು ಅವರ ಜಗಳ ಬಿಡಿಸಲು ಹೊರಟರು. ತಾನೇ ದುಬಾಯಿ ಮಂಜಣ್ಣ ಅಂದ್ಕೊಂಡು ಅದೇ ಶೈಲಿಯಲ್ಲಿ ಹೊರಟರು. ಆದರೆ ಅದದ್ದೇ ಬೇರೆ. ಆತ ಇವರನ್ನೇ ತಪ್ಪು ತಿಳಕೊಂಡು , ಇವರ ಮೇಲೆ ಏರಿಬಂದ ಮೊದಲ ಪೆಟ್ಟು ಅವನೇ ತಿಂದ ಜೋರಾಗಿಯೇ, ಆದರೆ ನಂತರದ್ದು ಮಾತ್ರ ಇವರ ಬಾರಿ, ಉಪ್ಪಿನಲ್ಲಿ ಹಾಕಿದ ಮಾವಿನ ಕಾಯಿಯಾಯ್ತು ಇವರ ಗತಿ,
ಅದೂ ಅಲ್ಲದೇ ನಂತರ ಇವರು "ಎತ್ತಣೆ" ( ಎಲಿವೇಟರ್) ಮೇಲೆ ಯಾವ ಧ್ಯಾನದಲ್ಲಿ ನಿಂತರೋ, ಅದರ ಮೇಲೆ ಒಂದು ಕಾಲು ಮಾತ್ರ ಇತ್ತು, ಅನಂತರ ಏನಾಯ್ತೊ ಗೊತ್ತಿಲ್ಲ, ಕಾಲು ಮೇಲೆ ತಲೆ ಕೆಳಗೆ ಆಗಿ , ಬಕೇಟು ನೆಲಕ್ಕೆ ತಾಗಿದ ಶಬ್ದ ( ಜತೆಯಲ್ಲಿ ಇವರೂ ಇದ್ದರಲ್ಲ) ಸ್ವಲ್ಪ ಜೋರಾಗಿಯೇ ಇತ್ತು, ಪಕ್ಕದಲ್ಲೇ ನಿಂತಿದ್ದ ಗೂರ್ಖಾ "ಎತ್ತಣೆ" ( ಎಲಿವೇಟರ್).... ಯನ್ನು ನಿಲ್ಲಿಸದಿದ್ದರೆ ಗೊತ್ತಿಲ್ಲ ಏನಾಗುತ್ತಿತ್ತೋ. ಅಂತು ಹಿಡಿದು ಎತ್ತಿದೆವು ಆಗೇನೋ ಸರಿಯಿದ್ದ ಹಾಗೆ ಅನ್ನಿಸಿತ್ತು .
ಸ್ವಲ್ಪ ಕಾಲ ಅವರನ್ನು ಅಲ್ಲಿಯೇ ಪಕ್ಕದ ಮನೆಯಮಕ್ಕಳ ಜತೆ ಬಿಟ್ಟು ನಾನು ನನ್ನ ಪರ್ಚೇಸಿಂಗ್ ಗೆ ಸ್ವಲ್ಪ ಕಾಲ ಬೇರೆ ಫ್ಲೋರ್ ಗೆ ಹೋಗಿದ್ದೆ. ವಾಪಾಸ್ಸು ಬಂದು ನೋಡಿದರೆ ... ಪೂರ್ತಿ ಬದಲಾಗಿದ್ದಾರೆ ಅನ್ನಿಸಿತು.್
"ಸ್ವಲ್ಪ ಕಾಲ ಎಂದರೆ ನಾನು ಕೇಳಿದೆ...?"
ಬರೇ ನನ್ನ ಎರಡು ಐಟಮ್ ಖರೀಧಿಸಿದೆ ಅಷ್ಟೇ,
ಅಂದರೆ ಸುಮಾರು ಎರಡು ಮೂರು ಗಂಟೆಗಳಾಗಿದ್ದಿರಬಹುದು ಅಷ್ಟೇ
ಸರಿ ನೀವು ಬಂದು ನೋಡಿದಾಗ ಏನಾಗಿತ್ತು..?
ನಾನು ಬಂದು ನೋಡುವಾಗ ಪ್ರಳಯವೇ ಬಂದಂತಾಗಿತ್ತು
ಯಾಕೆ..?
ನನ್ನವರನ್ನು ಮಂತ್ರಿ ಮಾಲ್ ನ ಗೇಟ್ ನ ಹೊರಗಡೆ ಕಳುಹಿಸಿದ್ದರು, ಅಲ್ಲಿಯೇ ಪುನಹ ಒಳಕ್ಕೆ ಬರ ಬಾರದ ಹಾಗೆ ಪಕ್ಕದಲ್ಲೇ ಸೆಕ್ಯುರಿಟಿ ಕೂಡಾ ಕಾಯುತ್ತಿದ್ದರು.
ಸರಿ ಆಮೇಲೆ..?
ಅವರ ಕೈಯ್ಯಲ್ಲೊಂದು ಪತ್ರವಿತ್ತು.
ಪತ್ರವಾ ? ಯಾವ ಪತ್ರ..?
ತ್ಯಾಂಪನ ಹೆಂಡತಿ ಕೊಟ್ಟ ಪತ್ರ ಓದಿದೆ ಒಕ್ಕಣೆ ಸರಿ ಸುಮಾರು ಹೀಗಿತ್ತು
ನನಗೂ ಅವರಿಗೂ ಮುಂದಿನ ೬ ತಿಂಗಳು ಮಾಲ್ ನೊಳಕ್ಕೆ ಪ್ರವೇಶ ನಿಷೇಧ ಹೇರಿದ್ದ ಪತ್ರವದು. ಆ ಪತ್ರದ ಒಕ್ಕಣೆ ಹೀಗಿತ್ತು.
ಮಿ ತ್ಯಾಂಪ ಹಾಗೂ ಅವರ ಧರ್ಮ ಪತ್ನಿಗೆ ಮುಂದಿನ ಆರು ತಿಂಗಳ ಕಾಲ ಮಂತ್ರಿ ಮಾಲ್ ನೊಳಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಕಾರಣ ಹೀಗಿದೆ
೧. ಹೆಂಗಸರ ಬಾಸ್ಕೇಟಿನಲ್ಲಿ ರೇಝರ್ ಗಳನ್ನೂ ಗಂಡಸರ ಬಾಸ್ಕೇಟಿನಲ್ಲಿ ಹೆಂಗಸರ ಒಳ ಉಡುಪುಗಳನ್ನೂ ಅವರ ವಸ್ತುಗಳ ಜತೆ ಸೇರಿಸಿ ಕೋಲಾಹಲವನ್ನುಂಟು ಮಾಡಿದ್ದಾರೆ.
೨. ಕೆಲವು ಗ್ರಾಹಕರ ಕಾಲ ಕೆಳಗಿನಿಂದ ಟೋಮೇಟೋ ಸಾಸ್ ಉದ್ದಕ್ಕೂ ಚೆಲ್ಲಿ ಅವರಲ್ಲಿ ಹಾಗೂ ನಮ್ಮ ಸ್ಟಾಫ್ ನವರಲ್ಲಿ ಆತಂಕ ಸೃಷ್ಟಿಸಿದ್ದಾರೆ.
೩. ಡ್ರೆಸ್ಸಿಂಗ್ ರೂಮ್ ನಲ್ಲಿ ಕೆಲಕಾಲವಿದ್ದು ಅಲ್ಲಿಂದ "ಹೇಯ್ ಇಲ್ಲಿ ಟೊಯ್ಲೆಟ್ ಪೇಪರ್ ಇಟ್ಟಿಲ್ಲ " ಅಂತ ಗಲಾಟೆ ಮಾಡಿದ್ದಾರೆ.
೪. ಮಕ್ಕಳ ಆಟಿಕೆಯ ವಿಭಾಗದಲ್ಲಿ ಎಲ್ಲಾ ಹಲವಾರು ಆಟಿಕೆಗಳ ಸ್ವಿಚ್ಚುಗಳನ್ನು ಅದುಮಿ ಅಲ್ಲಿಗೆ ಬಂದ ಮಕ್ಕಳನ್ನೂ ದೊಡ್ದವರನ್ನೂ ಕಂಗಾಲು ಮಾಡಿಸಿದ್ದಾರೆ
೫. ಹೆಂಗಸರು ಮಕ್ಕಳ ಮೇಲೆ ಎಲ್ಲೆಂಲ್ಲಿಂದಲೋ ಹಾವು ಜಿರಲೆ ಹಲ್ಲಿ( ಕೃತಿಮ) ಬೀಳಿಸಿ ಹಂಗಾಮಾ ಮಾಡಿದ್ದಾರೆ.
೬. ಹೆಂಗಸರು ಗಂಡಸರು ಎಂತ ಚೇಂಜ್ ರೂಮಿನ ಹೊಸ ಬೋರ್ಡಗಳನ್ನು ಬದಲಿಸಿ ಹಲವರನ್ನು ಬೆಚ್ಚಿ ಬೀಳಿಸಿದ್ದಾರೆ.
೭. ಮಕ್ಕಳ ವಿಭಾಗದ ಎಲ್ಲಾ ಮಕ್ಕಳಿಗೂ ಒಂದೊಂದು ಐಸ್ ಕ್ರೀಂ ಉಚಿತ ಎಂದು ಧ್ವನಿವರ್ಧಕದಲ್ಲಿ ಮಕ್ಕಳ ದನಿಯಲ್ಲಿ ಹೇಳಿಸಿ ಕೊಡದೇ ಇದ್ದಾಗ ಅವರೆಲ್ಲಾ ಅಳುವಂತೆ ಮಾಡಿ ಸತ್ಯಾ ನಾಶ್ ಮಾಡಿದ್ದಾರೆ
೮. ಪ್ರಿಂಟರ್ ಪೇಪರಗಳನ್ನು ಟೋಯ್ಲೆಟ್ ಪೇಪರ್ಗಳನ್ನೂ ಬದಲಿಸಿ ನಮ್ಮ ಸ್ಟಾಫ್ ಗಳನ್ನು ಬೇಸ್ತು ಬೀಳಿಸಿದ್ದಾರೆ.
೯. ಮಾಲ್ ನೊಳಗಿನ ಎಲ್ಲಾ ಗ್ರಾಹಕರ ಬಾಸ್ಕೇಟಿನಲ್ಲಿ ಮಿ ತ್ಯಾಂಪನವರು ಒಂದೊಂದು ಕಂಡೋಮ್ ಪ್ಯಾಕೇಟನ್ನು ಅವರಿಗೆ ಗೊತ್ತಿಲ್ಲದ ಹಾಗೆ ಹಾಕಿ ಅವರಲ್ಲಿ ಗಲಿಬಿಲಿ ಮೂಡಿಸಿರುತ್ತಾರೆ
೧೦. ಇಷ್ಟೂ ಸಾಲದೆಂಬಂತೆ ನಿಂತ ಫ್ಯಾನುಗಳನ್ನು ಒಮ್ಮೆಲೇ ಚಾಲೂ ಮಾಡಿಸಿ ಹಲವರ ವಿಗ್ ಗಳನ್ನು ಉದುರಿಸಿ ಅವರ ಮಂಡೆ ಬೋಳು ಮಾಡಿ ಎಲ್ಲರೂ ನಗುವಂತೆ ಮಾಡಿದ್ದಾರೆ.
ಈ ಎಲ್ಲಾ ಮೇಲಿನ ಕಾರಣಗಳಿಂದ ನಮ್ಮ ಎಲ್ಲಾ ಗ್ರಾಹಕರ ಸುಖ ಹಾಗೂ ಸಂತೋಷಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಎಲ್ಲಾ ಬ್ರಾಂಡ್ ಮಾಲುಗಳಲ್ಲಿ ತಮ್ಮ ಹಾಗೂ ತಮ್ಮವರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ದಯವಿಟ್ಟು ಸಹಕರಿಸ ತಕ್ಕದ್ದು.
ನನಗೆ ಸಂಶಯಬಂತು ಈ ಮೇಲಿನವುಗಳು ತ್ಯಾಂಪನ ಕೆಲಸವಾಗಿರಲು ಸಾಧ್ಯವೇ ಇಲ್ಲ, ತ್ಯಾಂಪ ಇನ್ನೊಬ್ಬರನ್ನು ಹಳ್ಳಕೆ ಬೀಳಿಸಿ ತಾನು ಎಂದೂ ನಗಲಾರ, ಬೇಕಾದರೆ ತಾನೇ ಬಿದ್ದು ನಕ್ಕಾನು...

ಸೀನ ಬಸ್ಸಿನಿಂದಿಳಿದು ಅಟೋರಿಕ್ಷಾ ದತ್ತ ನಡೆದ.
ಬರ್ತೀಯೇನಪ್ಪಾ..
ಸರಿ ಎಲ್ಲಿಗೆ ಸಾರ್
ಹೇಳಿದ
ಆಟೋ ಹೊರಟಿತು.
ಅದು ಹೋಗುವ ರಭಸ ಸೀನನಿಗೆ ಸಂಶಯಕ್ಕಿಟ್ಟುಕೊಂಡಿತು.
ಬೆಳಗಿನ ಹೊತ್ತು, ಅಲ್ಲೊಂದು ಇಲ್ಲೋಂದು ವಾಹನ ಮಾತ್ರ ರಸ್ತೆಯಲ್ಲಿ ಓಡಾಡುತ್ತಿವೆ, ಆದರೂ ಈತ ಒಂಬತ್ತೂವರೆ ಹತ್ತು ಗಂಟೆಯ ರಸ್ತೆಯಲ್ಲಿದ್ದಹಾಗೆ ಓಡಿಸುತ್ತಿದ್ದಾನೆ, ಅದೂ ಅರ್ಧ ಕಣ್ಣು ಮುಚ್ಚಿ, ನಿದ್ದೆಯಲ್ಲಿದ್ದಾನಾ ಹೇಗೆ ಅಂತ ಸೀನನಿಗೆ ಸಂಶಯವೂ ಬಂತು.ಅತ್ತಿನಿಂದ ಇತ್ತ ಇತ್ತಿಂದತ್ತ, ಹೀಗೇ ಇದ್ದರೆ ತನ್ನ ಅಸ್ತಿತ್ವಕ್ಕೆ ಸಂಚಕಾರ ವೆಂದರಿತ ಸೀನ ಮಿಣ್ಣಕ್ಕೆ ಅದರಿಂದ ಇಳಿದು ಸ್ವಲ್ಪ ಹೊತ್ತು ನಿಂತ. ಅದೃಷ್ಟಕ್ಕೆ ಸ್ವಲ್ಪ ದೂರದಲ್ಲಿ ಇನ್ನೊಂದು ಅಟೋ ಬರುವುದು ಕಂಡಿತು.ಅದರಲ್ಲಿ ಕುಳಿತು ಮೊದಲಿನದ್ದನ್ನು ಹಿಂಬಾಲಿಸಲು ಹೇಳಿದ. ಮುಂದಿನ ವ್ರತ್ತದಲ್ಲಿ ಮೊದಲಿನ ಆಟೋದವ ಹಿಂದಕ್ಕೆ ನೋಡಿ ಗಾಬರಿಯಿಂದ ತನ್ನ ಆಟೋದಿಂದ ಇಳಿದು ಅರ್ಧ ಆಶ್ಚರ್ಯ, ಅರ್ಧ ಹೆದರಿಕೆಯಿಂದ ಅದರ ಸುತ್ತ ತಿರುಗುತ್ತ ಇದ್ದು ಬಿಟ್ಟ.

ಸರಿಯಪ್ಪ ಇನ್ನು ಮುಂದೆ ಸೀದಾ ಹೋಗಿ ಬಲಗಡೆ ತಿರುಗು ಎಂದ ಸೀನ

ಗೆಳೆಯರೇ ಮರೆತಿರಾ ಆ ಸಂಜೆ ?

ಗೆಳೆಯರೇ ಮರೆತಿರಾ ಆ ಸಂಜೆ ?


ಬಾಳಿನ
ವಿಷಣ್ಣತೆಯ
ಮಾನದಂಡ
ಖಾಲಿಖಾಲಿ
ಬೆಂಚುಗಳು
ಭಣಗುಡುವ
ಏಕಾಂತ
ಗೆಳೆಯರೇ
ಇನ್ನೂ
ನೆನಪಿಗೆ
ಬರುತ್ತಿಲ್ಲವೇ
ಆ ಸಂಜೆಯ
ಸವಿಮಾತಿನ
ವಿಹಾರ
ಕೂಟ
ನಲಿವಾಟ
ನೀವೆಲ್ಲ
ಮರೆತರೂ,
ನಿಮ್ಮೆಲ್ಲರ
ಮತ್ತೊಮ್ಮೆ
ಒಂದಾಗೋ
ಸುದಿನಗಳ
ನಿರೀಕ್ಷೆಯಲ್ಲೇ
ತಾನು ಮಾತ್ರ
ದಿನಾ
ಇಲ್ಲೇ ಎನ್ನುವ
ಮೈಯೆಲ್ಲಾ
ಬೀಳಲು ಬಿಟ್ಟ

ದೊಡ್ಡಾಲ
ಉಧ್ಯಾನ
ಮತ್ತು
ನಾನು